ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆಗೆ ಘೋಷಣೆಯಾದ ಇಪತ್ತು ದಿನಗಳಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2022-23ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೈನುಗಾರಿಕೆ ಚಟುವಟಿಕೆಗಳಿಗೆ ನೆರವಾಗಲು ಕ್ಷೀರ ಸಮೃದ್ಧಿ ಸಹಕಾರ ಬ್ಯಾಾಂಕ್ ಸ್ಥಾಪಿಸುವುದಾಗಿ ಪ್ರಕಟಿಸಿದ್ದರು.
ಈ ಯೋಜನೆಗೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹಾಗೂ ಜಿಲ್ಲಾ ಹಾಲು ಒಕ್ಕೂಟಗಳು ಒಟ್ಟಾರೆ 260 ಕೋಟಿ ಹಾಗೂ ಸರ್ಕಾರ 100 ಕೋಟಿ ಷೇರು ಬಂಡವಾಳವನ್ನು ಒದಗಿಸಲಿದೆ ಎಂದು ಬಜೆಟ್ನಲ್ಲಿ ಘೋಷಿಸಿದ್ದರು. ಅದರಂತೆ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಮುಂಬರುವ ದಿನಗಳಲ್ಲಿ ಈ ಯೋಜನೆ ಅಡಿ ಪ್ರತಿ ತಾಲೂಕಿಗೆ ಒಂದು ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಭವಿಷ್ಯದಲ್ಲಿ 20 ಸಾವಿರ ಕೋಟಿ ವಾರ್ಷಿಕ ವಹಿವಾಟು ಗುರಿಯನ್ನು ಹೊಂದಲಾಗಿದೆ.
ಇದರಡಿ ರಾಜ್ಯದ ಹಾಲು ಉತ್ಪಾದಕರಿಗೆ ಸರಳ ಷರತ್ತುಗಳೊಂದಿಗೆ ಹೈನುಗಾರಿಕೆ ಮತ್ತು ಹೈನುಗಾರಿಕೆ ಕಸುಬು ಕೈಗೊಳ್ಳಲು ಸಾಲ ಸೌಲಭ್ಯ ಒದಗಿಸಲಾಗುತ್ತದೆ.
ಇನ್ನು ಬ್ಯಾಂಕ್ಗಳಲ್ಲಿ ಹಾಲು ಉತ್ಪಾದಕರ ಸದಸ್ಯರು 1000 ರೂ. ಮುಖ ಬೆಲೆಯ ಕನಿಷ್ಠ 1 ಷೇರು ಹಾಗೂ ಹಾಲು ಉತ್ಪಾದಕರ ಸಂಘಗಳು ತಲಾ 10 ಸಾವಿರ ರೂ ಮುಖಬೆಲೆಯ ಕನಿಷ್ಠ 1 ಷೇರು, ಅದೇ ರೀತಿ ರಾಜ್ಯದ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳು 1 ಕೋಟಿ ಮೊತ್ತದ ಕನಿಷ್ಠ 1 ಷೇರು ಮತ್ತು ಕರ್ನಾಟಕ ಹಾಲು ಮಹಾಮಂಡಳ 50 ಕೋಟಿ ಮೊತ್ತದ ಕನಿಷ್ಠ 1 ಷೇರು ಬಂಡವಾಳ ಒದಗಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.