ಬೆಳಗಾವಿ: ಯುವಕನೊಬ್ಬ ಸತ್ತಿದ್ದಾನೆಂದು ಆತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದದಾಗ ಆತ ಬದುಕಿದ್ದಾನೆ ಅಂತಾ ಗೊತ್ತಾದ ಅಚ್ಚರಿಯ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಶಂಕರ್ ಗೊಂಬಿ(27) ಎಂಬ ಯುವಕನಿಗೆ ಫೆಬ್ರವರಿ 27 ರಂದು ರಸ್ತೆ ದಾಟುವಾಗ ಕಾರು ಡಿಕ್ಕಿಯಾಗಿ ಶಂಕರ್ರವರಿಗೆ ತಲೆಗೆ ಏಟುಬಿದ್ದು ಗಂಭೀರ ಗಾಯಗಳಾಗಿತ್ತು. ಆತನನ್ನು ಚಿಕಿತ್ಸೆಗಾಗಿ ಅವರನ್ನು ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬದುಕುವ ಸಾಧ್ಯತೆ ಕಡಿಮೆ ಎಂದಿದ್ದ ವೈದ್ಯರು ಆತನನ್ನು ವೆಂಟಿಲೇಟರ್ ಅಳವಡಿಸಿ ಆಂಬುಲೆನ್ಸ್ ಮೂಲಕ ಮಹಾಲಿಂಗಪುರ ಪಟ್ಟಣಕ್ಕೆ ಕಳಿಸಲಾಗಿತ್ತು. ಮಾರ್ಗ ಮಧ್ಯೆ ಆತ ಸಾವನ್ನಪ್ಪಿದಾನೆಂದು ಅನುಮಾನಗೊಂಡ ಹೆತ್ತವರು ಆತನನ್ನು ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಶಂಕರ್ರನ್ನ ಪರೀಕ್ಷೆ ಮಾಡಿದ ವೈದ್ಯರು ಅವರು ಮೃತನಾಗಿದ್ದಾನೆಂದು ಎಂದು ಹೇಳಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.
ವಿಚಾರ ಗೊತ್ತಾಗುತ್ತಿದ್ದಂತೆ ತಮ್ಮ ಸ್ನೇಹಿತ ಸತ್ತನೆಂದು ತಿಳಿದು ಶಂಕರ್ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಮಿಸ್ ಯು ಅಂತ ಪೋಸ್ಟ್, ಸ್ಟೇಟಸ್ಗಳನ್ನ ಹಾಕಿಕೊಂಡಿದ್ದಾರೆ. ಮರಳಿ ಬಾರದೂರಿಗೆ ಪಯಣ ಎಂಬ ಹಾಡಿನ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನೂ ಅರ್ಪಿಸಿದ್ದಾರೆ. ಆದರೆ ಪೋಸ್ಟ್ ಮಾರ್ಟಂ ಮಾಡಲು ಮುಂದಾದ ವೈದ್ಯರು ಉಸಿರಾಟ, ಭುಜ ಕಾಲು ಚಲನವಲನ ಕಂಡು ಇವರಿನ್ನೂ ಬದುಕಿದ್ದಾರೆ ಎಂದು ಚಿಕಿತ್ಸೆಗಾಗಿ ವಾಪಸ್ಸ್ ಆಸ್ಪತ್ರೆಗೆ ಕಳಿಸಿದ್ದಾರೆ. ಆ ನಂತರ ಶಂಕರ್ ಗೆಳೆಯರು ಸೊಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಸ್ಟೇಟಸ್ಗಳನ್ನ ತೆಗೆದಿದ್ದಾರೆ. ಮತ್ತೆ ಸಾವನ್ನು ಗೆದ್ದು ಬಾ ಎಂದು ಹೊಸ ಪೋಸ್ಟ್ಗಳನ್ನು ಹಾಕಿದ್ದಾರೆ. ಸದ್ಯ ಶಂಕರ್ ಗೊಂಬಿಯವರನ್ನು ಮಹಾಲಿಂಗಪುರ ಪಟ್ಟಣದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.