ಬೆಂಗಳೂರು: ವಿದ್ಯಾಗಮ ಯೋಜನೆಯಿಂದಾಗಿ ಅಪ್ಪ ಅಮ್ಮ ಇಬ್ಬರಿಗೂ ಕೊರೊನ ಬಂದಿದೆ. ಅಮ್ಮನ ಸ್ಥಿತಿ ಗಂಭೀರವಾಗಿದೆ ದಯವಿಟ್ಟು ನನ್ನ ತಾಯಿಯನ್ನು ಉಳಿಸಿಕೊಡಿ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕುವ ಮೂಲಕ ಸರ್ಕಾರ ಹಾಗೇ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದ ಶಿಕ್ಷಕ ದಂಪತಿ ಪುತ್ರಿಯ ಮನವಿಗೆ ಸರ್ಕಾರ ಸ್ಪಂದಿಸಿದೆ.
ಮೂಡಬಿದರೆಯ ಮಕ್ಕಿ ಜವಹಾರ್ ನೆಹರೂ ಹೈಸ್ಕೂಲ್ ನ ಶಿಕ್ಷಕಿ ಪದ್ಮಾಕ್ಷಿ ಅವರಿಗೆ ಕರೊನಾ ಸೋಂಕು ತಗುಲಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿದ್ದಾರೆ. ಇವರ ಪತಿ, ಮೂಡಬಿದರೆಯ ಡಿ.ಜೆ. ಹೈಯರ್ ಪ್ರೈಮರಿ ಶಾಲೆ ಮುಖ್ಯಶಿಕ್ಷಕ ಶಶಿಕಾಂತ್ ಅವರಿಗೂ ಕೊರೊನಾ ದೃಢಪಟ್ಟಿದೆ. ಇದರಿಂದ ಕಂಗಾಲಾದ ಇವರ ಪುತ್ರಿ ಐಶ್ವರ್ಯಾ, ಆರ್ಥಿಕ ನೆರವಿಗಾಗಿ ಫೇಸ್ಬುಕ್ನಲ್ಲಿ ಕೋರಿದ್ದರು.
ಈ ಕುರಿತು ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದಂತೆ ಎಚ್ಚೆತ್ತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಕೂಡಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿ ಶಿಕ್ಷಕಿಗೆ ಉತ್ತಮ ಚಿಕಿತ್ಸೆ ನೀಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಗುಣಮಟ್ಟದ ಚಿಕಿತ್ಸೆಗೆ ವ್ಯವಸ್ಥೆ ಮತ್ತು ಆ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ. ಸರ್ಕಾರದ ಸೂಚನೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಐಶ್ವರ್ಯಾಳನ್ನು ಸಂಪರ್ಕಿಸಿ, ತಾಯಿಯ ಚಿಕಿತ್ಸೆ ಕುರಿತು ಸರ್ಕಾರ ಪೂರ್ಣ ಕಾಳಜಿ ವಹಿಸಿದೆ. ಯಾವುದೇ ಆತಂಕ ಬೇಡ ಎಂದು ಸಾಂತ್ವಾನ ಹೇಳಿದ್ದಾರೆ.
ಈ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಸದರಿ ಶಿಕ್ಷಕಿಯ ಚಿಕಿತ್ಸೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.