ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನದಲ್ಲಿ ಏರಿಕೆ ಕಂಡುಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ ಒಂದು ಹಾಸಿಗೆ, ಸಮುದಾಯ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ತಲಾ 2 ಹಾಸಿಗೆ ಮತ್ತು ವೆನ್ಲಾಕ್ ಆಸ್ಪತ್ರೆಯಲ್ಲಿ 6 ಬೆಡ್ಗಳನ್ನು ಬಿಸಿಲಿಗೆ ಸಂಬಂಧಿಸಿ ಸಮಸ್ಯೆಯಾದವರಿಗೆ ಚಿಕಿತ್ಸೆಗೆಂದು ಸಿದ್ಧವಾಗಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಪತ್ರಿಕಾಭವನದಲ್ಲಿ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ತಿಮ್ಮಯ್ಯ, ಆಸ್ಪತ್ರೆಯ ಸಿಬಂದಿಗೂ ವಿವಿಧ ಹಂತದ ತರಬೇತಿ ನೀಡಲಾಗಿದೆ. ದ.ಕ.ದಲ್ಲಿ ಈ ಬಾರಿ ತಾಪಮಾನದಲ್ಲಿ ಅತೀ ಹೆಚ್ಚಿನ ಏರಿಕೆ ಕಂಡು ಬಂದಿದ್ದು, ಕೆಲವು ಕಡೆಗಳಲ್ಲಿ 5 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಾಗಿದೆ. ಇದರಿಂದಾಗಿ ದೇಹದ ತಾಪಮಾನದಲ್ಲಿಯೂ ವ್ಯತ್ಯಯವಾಗಿ ವಿಪರೀತ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಆ ಹಿನ್ನೆಲೆಯಲ್ಲಿ ಮುಂದಿನ ಮಳೆಗಾಲದ ವರೆಗೆ ಸಾರ್ವಜನಿಕರು ಸಾಕಷ್ಟು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ನಿರ್ದಿಷ್ಟ ಉಷ್ಣಾಂಶಕ್ಕೆ ಒಗ್ಗಿ ಹೋಗಿದ್ದ ದೇಹದಲ್ಲಿ ಪ್ರಸ್ತುತ ಅಧಿಕ ತಾಪಮಾನದಿಂದ ಚರ್ಮದಲ್ಲಿ ತುರಿಕೆ, ಸುಸ್ತು, ನಿಶ್ಶಕ್ತಿ, ಕುಸಿದು ಬೀಳುವುದು, ಚರ್ಮದಲ್ಲಿ ಗಿಳ್ಳೆ, ಕಾಲುಗಳಲ್ಲಿ ಬಾವು, ಸೆಳೆತ, ತಲೆಸುತ್ತು ಬರುವುದು, ವಾಂತಿ, ಅತಿಯಾದ ದಣಿವು ಮೊದಲಾದವುಗಳು ಉಂಟಾಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆಯ ಅಗತ್ಯವಿದೆ,’ ಎಂದರು.