ಬಾಗಲಕೋಟೆ: ಯುವತಿಯೊಬ್ಬಳು ಮೊದಲನೇ ಗಂಡನನ್ನು ತ್ಯಜಿಸಿ, ಆತನಿಗೆ ವಿಚ್ಛೇದನವನ್ನೂ ನೀಡದೆ ಪ್ರಿಯಕರನನ್ನು ಮದುವೆಯಾದ ವಿಚಿತ್ರ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಹೌದು, 2017ರಲ್ಲಿ ಬಾಲ್ಯ ವಿವಾಹಕ್ಕೊಳಗಾಗಿದ್ದ ಯುವತಿ, ಪತಿಯ ಕಿರುಕುಳ ತಾಳಲಾರದೇ ಮದುವೆಗೂ ಮುನ್ನ ಪ್ರೇಮಿಸುತ್ತಿದ್ದ ಪ್ರೀಯಕರನ ಊರು ಬಾಗಲಕೋಟೆಗೆ ಬಂದು ಮುಚಖಂಡಿ ವೀರಭದ್ರೇಶ್ವರ ದೇಗುಲದಲ್ಲಿ ಪ್ರೀಯಕರನ ಕೈಹಿಡಿದಿದ್ದಾಳೆ.
ತುಮಕೂರು ಜಿಲ್ಲೆಯ ಮೂಲದ 21 ವರ್ಷದ ಐಶ್ವರ್ಯ ತನ್ನ ಗಂಡನನ್ನು ಬಿಟ್ಟು ಪ್ರಿಯಕರ ಬಾಗಲಕೋಟೆಯ ನವನಗರದ ಆಕಾಶ್ ಸೊನ್ನ ಎಂಬಾತನೊಂದಿಗೆ ಮದುವೆಯಾಗಿದ್ದಾಳೆ. ಐಶ್ವರ್ಯಗೆ ಬಾಲ್ಯ ವಿವಾಹ ಮಾಡಲಾಗಿತ್ತಂತೆ. ಬಳ್ಳಾರಿ ಮೂಲದ ಯುವಕನೊಂದಿಗೆ ಮದುವೆಯಾಗಿದ್ದ ಐಶ್ವರ್ಯಗೆ ಕುಟುಂಬದಲ್ಲಿ ಕಿರುಕುಳ ಇತ್ತು ಎಂದು ಹೇಳಿದ್ದಾರೆ. ಮದುವೆಯ ನಂತರವೂ ಪ್ರಿಯಕರನೊಂದಿಗೆ ಸಂಪರ್ಕದಲ್ಲಿದ್ದ ಈಕೆ ಇದೀಗ ಅವನ ಜೊತೆಯಲ್ಲೇ ಸಪ್ತಪದಿ ತುಳಿದಿದ್ದಾಳೆ. ತನ್ನ ಕುಟುಂಬಸ್ಥರಿಗೆ ತಾನು ಪ್ರೀತಿಸಿದ ಯುವಕನೊಂದಿಗೆ ಜೀವನ ನಡೆಸೋದಾಗಿ ಹೇಳಿದ್ದಾರೆ.
ಬಾಲ್ಯವಿವಾಹದ ಕಥೆ
2017ರಲ್ಲಿ ಐಶ್ವರ್ಯಗೆ 17 ವರ್ಷ ಇರುವಾಗ ಆಕೆಯ ಕುಟುಂಬಸ್ಥರು, ಬಳ್ಳಾರಿ ಮೂಲದ ಯುವಕನಿಗೆ ಬಾಲ್ಯ ವಿವಾಹ ಮಾಡಿಕೊಟ್ಟಿದ್ದಾರೆ. ಬಳ್ಳಾರಿ ಮೂಲದ ಐಶ್ವರ್ಯ ಪತಿ, ಮಾಜಿ ಸಚಿವ ಸಂತೋಷ್ ಲಾಡ್ ಅವರ ಬೆಂಗಳೂರಿನ ಕಚೇರಿಯಲ್ಲಿ ಕೆಲ್ಸ ಮಾಡ್ತಿದ್ದಾನಂತೆ. ಪತಿ ಹಾಗೂ ಮಾವನ ಕಿರುಕುಳ ಹೆಚ್ಚಾಗಿ, ಒಮ್ಮೆ ನನಗೆ ಮಾವ ವಿಷ ಹಾಕಿ ಸಾಯಿಸಲು ಬಂದಿದ್ರು ಎಂದು ಐಶ್ವರ್ಯ ಹೇಳುತ್ತಿದ್ದಾಳೆ.
ಇತ್ತ ಪ್ರಿಯಕರ ಆಕಾಶ್ ಪರಿಚಯವಾಗಿದ್ದು ಹೇಗೆ ?
ಬಾಗಲಕೋಟೆ ನವನಗರದ ಆಕಾಶ್ ಸೊನ್ನ 2016ರಲ್ಲಿ ಚಿತ್ರದುರ್ಗಕ್ಕೆ ಪ್ರವಾಸಕ್ಕೆ ಹೋಗಿದ್ದಾನೆ. ಅದೇ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ಮೂಲದ ಐಶ್ವರ್ಯ ಕೂಡಾ ಚಿತ್ರದುರ್ಗಕ್ಕೆ ಪ್ರವಾಸಕ್ಕೆ ಹೋಗಿದ್ದಾಳೆ. ಆಗ ಇಬ್ಬರ ಮಧ್ಯೆ ಪರಿಚಯವಾಗಿದೆ. ಆಕಾಶ್ ಮೊಬೈಲ್ ನಂಬರ್ ಪಡೆದಿದ್ದ ಐಶ್ವರ್ಯ, ತನ್ನ ತಂದೆಯ ಮೊಬೈಲ್ ನಂಬರ್ ನಿಂದ ಆಕಾಶ್ ನೊಂದಿಗೆ ಮಾತನಾಡುತ್ತಾ ಇಬ್ಬರ ಮಧ್ಯೆ ಪ್ರೇಮ ಗಟ್ಟಿಯಾಗಿದೆ. ಆಗ ಇವರ ಪ್ರೀತಿಗೆ ಜಾತಿ ಅಡ್ಡಿ ಬರುತ್ತದೆ, ಅನ್ಯಜಾತಿ ಯುವಕನೊಂದಿಗೆ ಮದುವೆಗೆ ಒಪ್ಪುವುದಿಲ್ಲವೆಂದು ಪ್ರೀತಿ ವಿಚಾರವನ್ನು ತಮ್ಮ ಕುಟುಂಬಸ್ಥರೊಂದಿಗೆ ಐಶ್ವರ್ಯ ಹೇಳಿಕೊಂಡಿಲ್ಲ. ಮದುವೆಯಾದ ನಂತರವೂ ಪ್ರಿಯಕರ ಆಕಾಶ್ ಐಶ್ವರ್ಯ ಮಧ್ಯೆ ಸಂಪರ್ಕದಲ್ಲಿದ್ದರಂತೆ. ಆಗಾಗ ಇವರಿಬ್ಬರು ಬೆಂಗಳೂರಿನಲ್ಲಿ ಭೇಟಿ ಆಗುತ್ತಿದ್ದಾರೆಂದು ತಿಳಿದು ಬಂದಿದೆ.