ಮುಂಬೈ: ಅಂಡರ್ವರ್ಲ್ಡ್ ಡಾನ್ ಛೋಟಾ ರಾಜನ್ ಹಾಗೂ ರವಿ ಪೂಜಾರಿ ಸಹಚರನಾಗಿ ಬಳಿಕ ತನ್ನದೇ ನಟೋರಿಯಸ್ ಗ್ಯಾಂಗ್ ಕಟ್ಟಿಕೊಂಡು ಮುಂಬೈನಲ್ಲಿ ಬಾರ್ ಮಾಲೀಕರಿಂದ, ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದ ಕರಾವಳಿ ಮೂಲದ ಗ್ಯಾಂಗ್ಸ್ಟರ್ ಸುರೇಶ್ ಪೂಜಾರಿಯನ್ನು ಫಿಲಿಪೈನ್ಸ್ ದೇಶದಿಂದ ಗಡಿಪಾರು ಮಾಡಲಾಗಿದೆ.
ಮುಂಬೈ ಬಳಿಯ ಥಾಣೆ, ಕಲ್ಯಾಣ್, ಉಲ್ಲಾಸನಗರ ಮತ್ತು ಡೊಂಬಿವಿಲಿಯಲ್ಲಿ ನಡೆದ ಸುಲಿಗೆ ಪ್ರಕರಣಗಳಲ್ಲಿ ಬೇಕಾಗಿದ್ದ ಸುರೇಶ್ ಪೂಜಾರಿಯನ್ನು ಮಂಗಳವಾರ ತಡರಾತ್ರಿ ಭಾರತಕ್ಕೆ ಕರೆತರಲಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಸುರೇಶ್ ಪೂಜಾರಿ ಬಂದಿಳಿದ ನಂತರ ಐಬಿ ಮತ್ತು ಸಿಬಿಐ ಅಧಿಕಾರಿಗಳು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ವಿಚಾರಣೆ ನಡೆಸಿದ ಬಳಿಕ ಆತನನ್ನು ಐಬಿ ಮತ್ತು ಸಿಬಿಐ ಅಧಿಕಾರಿಗಳು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ.
ಬಾಲಕನಾಗಿದ್ದಾಗಲೇ ಹೋಟೆಲ್ ಕೆಲಸಕ್ಕೆಂದು ಮುಂಬೈಗೆ ತೆರಳಿದ್ದ ಸುರೇಶ್, ಕೆಲ ವರ್ಷಗಳ ಬಳಿಕ ಯಾವುದೋ ಕೇಸ್ನಲ್ಲಿ ಜೈಲು ಪಾಲಾಗಿದ್ದ. ಈ ವೇಳೆ ರವಿ ಪೂಜಾರಿಯ ಸಂಪರ್ಕಕ್ಕೆ ಬಂದಿದ್ದ ಬಳಿಕ ಛೋಟಾ ರಾಜನ್ ಜತೆಗೂ ಇದ್ದ. ದಶಕದ ಹಿಂದೆ ಅವರಿಬ್ಬರಿಂದಲೂ ಅಂತರ ಕಾಯ್ದುಕೊಂಡು ತನ್ನದೇ ಗ್ಯಾಂಗ್ ಕಟ್ಟಿಕೊಂಡು ಭೂಗತ ಲೋಕದಲ್ಲಿ ಗುರುತಿಸಿಕೊಂಡಿದ್ದ.
ನವೀ ಮುಂಬೈ, ಮುಂಬೈ ಹಾಗೂ ಥಾಣೆಯಲ್ಲಿನ ಬಾರ್ ಮಾಲೀಕರಿಗೆ ಕರೆ ಮಾಡಿ ಹಫ್ಘಾಕ್ಕಾಗಿ ಬೆದರಿಕೆ ಹಾಕುತ್ತಿದ್ದ. ಹಣ ಕೊಡದೆ ಇದ್ದರೆ ಕೊಲೆ ಬೆದರಿಕೆ ಹಾಕುತ್ತಿದ್ದ. ತನ್ನ ಸಹಚರರ ಮೂಲಕ ಬಾರ್ಗಳಿಗೆ ಶೂಟ್ ಮಾಡಿ ಹೆದರಿಸಿ ಹಣ ಲೂಟಿ ಮಾಡುತ್ತಿದ್ದ. 2015ರಲ್ಲಿ ಕೇಬಲ್ ಆಪರೇಟರ್ ಓರ್ವನನ್ನು ಕೊಲೆ ಮಾಡಿಸಿದ್ದ. 2018ರಲ್ಲಿ ಕಲ್ಯಾಣ್ ಭಿವಂಡಿಯ ಹೋಟೆಲ್ಗೆ ಶಾರ್ಪ್ ಶೂಟರ್ಗಳ ಮೂಲಕ ಗುಂಡು ಹಾರಿಸಿ ಅಲ್ಲಿದ್ದ ಸ್ವಾಗತಕಾರನನ್ನು ಕೊಲೆ ಮಾಡಿಸಿದ್ದ.
2007ರಲ್ಲಿ ಮುಂಬೈ ಬಿಟ್ಟು ವಿದೇಶಕ್ಕೆ ತೆರಳಿದ್ದ ಸುರೇಶ್ ಪೂಜಾರಿ ಅಲ್ಲಿಂದಲೇ ತನ್ನ ಸಹಚರರ ಮೂಲಕ ಕೆಲಸ ಮಾಡಿಸುತ್ತಿದ್ದ. ಆತನ ಪತ್ತೆಗೆ ಮುಂಬೈ ಪೊಲೀಸರು ಇಂಟರ್ಪೋಲ್ ನೋಟಿಸ್ ಜಾರಿ ಮಾಡಿದ್ದರು. ಮಲೇಷ್ಯಾ, ಕೆನಡಾ, ಫಿಲಿಪೈನ್, ದುಬೈ ಮೊದಲಾದ ಕಡೆ ತನ್ನ ವಾಸ ಬದಲಾಯಿಸುತ್ತಿದ್ದ 2020ರ ಸೆಪ್ಟೆಂಬರ್ನಿಂದ ಫಿಲಿಪೈನ್ನಲ್ಲಿಯೇ ನೆಲೆಸಿದ್ದ ಮುಂಬೈ ಮತ್ತು ಥಾಣೆ ಪೊಲೀಸರು ಕ್ರಮವಾಗಿ 2017 ಮತ್ತು 2018ರಲ್ಲಿ ಸುರೇಶ್ ಪೂಜಾರಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದರು. 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸುರೇಶ್ ಪೂಜಾರಿ 2021 ಅಕ್ಟೊಬರ್ ನಲ್ಲಿ ಫಿಲಿಪೈನ್ಸ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.