ಕಟಪಾಡಿ: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಕುರ್ಚಿಗೆ ಈಗಲೇ ಹಾತೊರೆಯುತ್ತಿದ್ದು, ಇನ್ನು 20 ವರ್ಷಗಳ ಕಾಲ ಖಂಡಿತವಾಗಿಯೂ ಅವರು ಆ ಕುರ್ಚಿ ಏರುವುದಿಲ್ಲ. ಬಿಜೆಪಿಯೇ ಮುಂದಿನ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಭಾನುವಾರ ಉಡುಪಿ ಜಿಲ್ಲೆಯ ಕಾಪು ವಿದ್ಯಾಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತವೂ ಪ್ರಧಾನಿ ಮೋದಿ ಅವರ ಅದ್ಬುತವಾದ ದೃಢವಾದ ಚಿಂತನೆ ಮತ್ತು ಯೋಜನಾ ಆಡಳಿತದಿಂದ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ. ಬೆಳಗಾವಿಯಲ್ಲಿ ಮತದಾರರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯ ಗುಲ್ಬರ್ಗ ಕ್ಷೇತ್ರದಲ್ಲಿ ಕಮಲ ಅರಳಿದ್ದು ಕಾಂಗ್ರೆಸ್ ಕೋಟೆ ಛಿದ್ರಗೊಂಡಿದೆ. ಇಡೀ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ವಾತಾವರಣವನ್ನು ಹೊಂದಿದೆ ಎಂದು ಅವರು ಹೇಳಿದರು.
ಪಕ್ಷದ ಶಾಸಕರೆಲ್ಲರೂ ಬೂತ್ ಅಧ್ಯಕ್ಷರಿಗೆ ವಿಶ್ವಾಸ ತುಂಬಿಸುವ ಮತ್ತು ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಹಾಗೂ ಪಕ್ಷವನ್ನು ಬಲಪಡಿಸುವಂತೆ ಒತ್ತಾಯಿಸಿದರು. ಪಕ್ಷದ ಬೂತ್ ಮಟ್ಟದ ಘಟಕಗಳನ್ನು ಬಲಪಡಿಸುವುದು ಚುನಾವಣಾ ಕಾರ್ಯತಂತ್ರದ ಒಂದು ಭಾಗವಾಗಿದೆ ಎಂದು ಅವರು ಹೇಳಿದರು. ವೇಗವಾಗಿ ಸಮೀಪಿಸುತ್ತಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಏರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.