ಪುತ್ತೂರು: ಕ್ಯಾಂಪ್ಕೋ ಸಂಸ್ಥೆಗೆ ಕೊಕ್ಕೋ ಬೀಜ ಸರಬರಾಜು ವ್ಯವಹಾರದಲ್ಲಿ ವಂಚನೆ ನಡೆಸಿದ್ದ ಆರೋಪದಲ್ಲಿ ಮುಂಬೈಯಲ್ಲಿ ಬಂಧಿತನಾಗಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣೆಯ ಪೊಲೀಸರು ಕರೆತಂದು ಪುತ್ತೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪೊಲೀಸರ ಕೋರಿಕೆಯಂತೆ ನ್ಯಾಯಾಲಯ ಆರೋಪಿಯನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಬಂಟ್ವಾಳ ತಾಲೂಕಿನ ಶಂಬೂರು ಕೋಸ್ಪಾಕ್ ಏಶ್ಯಾ ಇಂಟರ್ ನ್ಯಾಷನಲ್ ಕಂಪನಿ. ಲಿ ಎನ್ನುವ ಕೊಕ್ಕೋ ಸರಬರಾಜು ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನು ಹೊಂದಿರುವ ಆರೋಪಿ ಶಂಬೂರು ನಿವಾಸಿ ವಿನ್ಸಿ ಪಿಂಟೋ ಬಂಧಿತ ಆರೋಪಿಯಾಗಿದ್ದು, ಈತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಮಾ.8ರಂದು ವಶಕ್ಕೆ ಪಡೆದುಕೊಂಡಿದ್ದು, ಪೊಲೀಸರು ಆತನನ್ನು ಪುತ್ತೂರಿಗೆ ಮಾ. 9ರಂದು ಕರೆತಂದಿದ್ದರು.
ಈ ಸಂದರ್ಭದಲ್ಲಿ ಆತನ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮಾ.10ರಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಆರೋಪಿಯನ್ನು ವಿಚಾರಿಸುವ ನಿಟ್ಟಿನಲ್ಲಿ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆಯೇ ಆರೋಪಿಯನ್ನು 4 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.


