ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ಮಾಜಿ ಶಾಸಕ ರಘುಪತಿ ಭಟ್ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಬಡನಿಡಿಯೂರು ಗ್ರಾಮದ ತಮ್ಮ ಉದ್ದೇಶಿತ ರೆಸಾರ್ಟ್ ಯೋಜನೆಗೆ ಏಕ-ವಿನ್ಯಾಸ ಅನುಮೋದನೆ ನೀಡದೆ ಸತಾಯಿಸುತ್ತಿರುವ ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ಮಾಜಿ ಶಾಸಕ ರಘುಪತಿ ಭಟ್ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರಘುಪತಿ ಭಟ್, “ಕಳೆದ 24 ತಿಂಗಳುಗಳಿಂದ ಅನುಮೋದನೆಗಾಗಿ ಪ್ರಾಧಿಕಾರಕ್ಕೆ ಅಲೆಯುತ್ತಿದ್ದೇನೆ. ವಲಯ ಬದಲಾವಣೆ, ಹೈಕೋರ್ಟ್ ನಿರ್ದೇಶನ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳ ಅನುಮತಿ ಇದ್ದರೂ ಆಯುಕ್ತರು ಅನುಮೋದನೆ ನೀಡುತ್ತಿಲ್ಲ. ಉಡುಪಿ ನಗರಸಭೆ ಯುಕ್ತ ಮಹೇಶ್ ಅವರು ‘ಕಲೆಕ್ಷನ್ ಮಾಸ್ಟರ್’ ಆಗಿದ್ದು, ಹಣಕ್ಕಾಗಿ ಜನರಿಗೆ ಕಿರುಕುಳ ನೀಡುತ್ತಿದ್ದಾರೆ,” ಎಂದು ಗಂಭೀರ ಆರೋಪ ಮಾಡಿದರು. ಈ ವಿಳಂಬಕ್ಕೆ ಹಾಲಿ ಶಾಸಕ ಯಶ್ಪಾಲ್ ಸುವರ್ಣ ಅವರ ರಾಜಕೀಯ ಪ್ರಭಾವವೇ ಕಾರಣ ಎಂದು ಅವರು ಕಿಡಿ ಕಾರಿದರು.
ರಘುಪತಿ ಭಟ್ ಅವರ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿರುವ ಯುಡಿಎ ಆಯುಕ್ತ ಮಹೇಶ್, “ಈ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಬಾಕಿ ಇದೆ. ನಾವು ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ. ನಿಯಮಾನುಸಾರವೇ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ. ಮಾಜಿ ಶಾಸಕರ ಈ ಪ್ರತಿಭಟನೆಯು ಜಿಲ್ಲಾ ರಾಜಕೀಯದಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಶೀತಲ ಸಮರವನ್ನು ಬೀದಿಗೆ ತಂದಿದೆ.


