ಬೆಂಗಳೂರು: ರಾಜ್ಯದ ಗಿರಿ ಶಿಖರಗಳಲ್ಲಿ ಚಾರಣದ ಸಂದರ್ಭದಲ್ಲಿ ಪದೇ ಪದೇ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚಾರಣಕ್ಕೆ ಎಸ್ ಒಪಿ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಇಂದು ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಅರಣ್ಯ ಇಲಾಖೆ ಟ್ರೆಕ್ಕಿಂಗ್ ಗಾಗಿ ಪ್ರಮಾಣಿತ ಕಾರ್ಯಾಚರಣಾ ವಿಧಾನ ಬಿಡುಗಡೆ ಮಾಡಿದಂತಾಗಿದೆ.
ಎಸ್ಓಪಿ ಪ್ರಕಾರ ಚಾರಣಿಗರ ಮೊಬೈಲ್ ಫೋನ್ ಗೆ ಟ್ರ್ಯಾಕಿಂಗ್ ಆ್ಯಪ್ ಅಳವಡಿಸಿ ಹತ್ತು ಚಾರಣಿಗರಿಗೆ ಒಬ್ಬ ಗೈಡ್ ಕಡ್ಡಾಯವಾಗಿ ನಿಯೋಜಿಸಲಾಗುತ್ತದೆ. ಆನ್ ಲೈನ್ ಮೂಲಕವೇ ಚಾರಣದ ಬುಕ್ಕಿಂಗ್ ಮಾಡಬೇಕಾಗಿದ್ದು, 10 ಮಂದಿಗೆ ಒಬ್ಬ ಗೈಡ್ ನಿಯೋಜಿಸಿದ ಬಳಿಕವೇ ಚಾರಣಕ್ಕೆ ಅವಕಾಶ ಕೊಡಲಾಗುತ್ತದೆ.
ಒಂದು ಬಾರಿ ಚಾರಣಕ್ಕೆ 150 ಮಂದಿಗೆ ಮಾತ್ರ ಅವಕಾಶ ಇದ್ದು, 150 ಮಂದಿಯ ತಂಡ ಮರಳಿದ ಬಳಿಕವೇ ಮತ್ತೊಂದು ತಂಡವನ್ನು ಕಳಿಸಲಾಗುತ್ತದೆ.ಗೈಡ್ ಗೆ ಜಿಪಿಎಸ್ ಇರುವ ವಾಕಿಟಾಕಿ ನೀಡಲಾಗುತ್ತದಲ್ಲದೇ ಟಾರ್ಚ್, ಹೆಡ್ ಲ್ಯಾಂಪ್ ಸೇರಿದಂತೆ ತುರ್ತು ಉಪಕರಣಗಳನ್ನು ಚಾರಣಿಗರು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕಾಗುತ್ತದೆ.ಚಾರಣದ ವೇಳೆ ದುಸ್ಸಾಹಸ ಮಾಡುವ ಚಾರಣಿಗನ ಮೇಲೆ ಗೈಡ್ ಮೊಬೈಲ್ ಆ್ಯಪ್ ನಲ್ಲೇ ದೂರು ದಾಖಲಿಸಲು ಅವಕಾಶವಿದ್ದು, ಅಂತಹವರನ್ನು ಚಾರಣಕ್ಕೆ ಅನರ್ಹ ಮಾಡಲಾಗುತ್ತದೆ.


