ಬೆಳ್ತಂಗಡಿ: ಮನೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದ 3 ಕ್ವಿಂಟಾಲ್ ರಬ್ಬರ್ ಶೀಟ್, ಕರಿ ಮೆಣಸು ಮಹತ್ವದ ದಾಖಲೆ ಪತ್ರಗಳು, ಮತ್ತು ಹಣ ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಪಿಜಿನಡ್ಕದಲ್ಲಿ ನಡೆದಿದೆ.
ಕೊಕ್ಕಡ ಗ್ರಾಮದ ಪಿಜಿನಡ್ಕ ಪಿ.ಕೆ ಚೀಂಕ್ರರವರು ಹೊಸಮನೆ ಕಟ್ಟುತ್ತಿದ್ದು, ಹಾಗಾಗಿ ಹಳೆ ಮನೆಯ ಕೆಲ ಸಾಮಾನು, ರಬ್ಬರ್ ಶೀಟ್, ಮನೆ ಪತ್ರ ಹಾಗೂ ಹಣವನ್ನು ಹಳೆ ಮನೆಗೆ ಹೊಂದಿಕೊಂಡಿದ್ದ ಕೊಟ್ಟಿಗೆಯಲ್ಲಿ ಇಡಲಾಗಿತ್ತು. ಅಲ್ಲದೆ ಅಡುಗೆ ಕೋಣೆಯಲ್ಲಿ ರಬ್ಬರ್ ಶೀಟನ್ನು ಕೂಡ ಒಣಗಲು ಹಾಕಿದ್ದರು.
ಎಂದಿನಂತೆ ಬೆಳಿಗ್ಗೆ 6 ಗಂಟೆಯ ನಂತರ ಅಡುಗೆ ಕೆಲಸ ಮಾಡುತ್ತಿದ್ದರು. ಮನೆಮಂದಿ ಹೊಸಮನೆಯಲ್ಲಿದ್ದರು. 7 ಗಂಟೆಯ ಹೊತ್ತಿಗೆ ಬೆಂಕಿ ಹಿಡಿದು ಮನೆಯ ಹೆಂಚು ಹಾಗೂ ಶೀಟ್ ಒಡೆಯುವ ಸದ್ದು ಕೇಳಿ ಹೊರಗೆ ಬಂದು ನೋಡಿದಾಗ ರಬ್ಬರ್ ಶೀಟ್ಗೆ ತಗುಲಿದ ಬೆಂಕಿ ಮನೆಯನ್ನು ಸಂಪೂರ್ಣವಾಗಿ ಆವರಿಸಿತ್ತು
ಕೂಡಲೇ ಅಕ್ಕಪಕ್ಕದವರು ಸೇರಿ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದು, ಅದಾಗಲೇ 3 ಕ್ವಿಂಟಾಲ್ಗೂ ಮಿಕ್ಕಿದ ರಬ್ಬರ್ ಶೀಟ್, ಅಗತ್ಯ ದಾಖಲೆ ಪತ್ರಗಳು ಹಾಗೂ ಬ್ಯಾಗಿನಲ್ಲಿದ್ದ ಸುಮಾರು 30ಸಾವಿರ ನಗದು ಸೇರಿದಂತೆ ಸುಮಾರು 1.50 ಲಕ್ಷ ರೂ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.
ಇನ್ನು ಬೆಂಕಿ ಅನಾಹುತಕ್ಕೆ ಕಾರಣ ಏನೂ ಅನ್ನೋ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಘಟನೆ ನಡೆಯುವ ವೇಳೆ ಮನೆಯಲ್ಲಿ ಯಾರು ಇಲ್ಲದ್ದರಿಂದ ಭಾರೀ ಅನಾಹುತ ತಪ್ಪಿದೆ.