ತಿರುವನಂತಪುರಂ: ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಯಲ್ಲಿ ಅತ್ಯಂತ ಮಹತ್ವದ ಗಳಿಗೆಗೆ ಕ್ಷಣಗಣನೆ ಆರಂಭವಾಗಿದೆ. ಮಕರ ಸಂಕ್ರಾಂತಿ ದಿನವಾದ ಇಂದು ಪವಿತ್ರ ಮಕರ ಜ್ಯೋತಿ ದರ್ಶನ ಹಾಗೂ ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜೆಯ ಸಂಪ್ರದಾಯಗಳು ನೆರವೇರಲಿದ್ದು, ಕೋವಿಡ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರುವ ಭಕ್ತರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
ತಂತ್ರಿಗಳಾದ ಕಂದಾದಾರು ರಾಜೀವರು ನೇತೃತ್ವದಲ್ಲಿ ದೇವಾಲಯದಲ್ಲಿ ಬಿಂಬಾಶುದ್ಧಿ ಸೇರಿದಂತೆ ಶುದ್ಧೀಕರಣಗಳು ನಡೆದಿದ್ದು, ಇಂದು ಸಂಜೆ ಹೊತ್ತಿಗೆ ದೇವರ ಆಭರಣಗಳನ್ನು ಉತ್ಸವ ಮೂಲಕ ದೇವಾಲಯಕ್ಕೆ ತರಲಾಗುವುದು. ಕೊರೊನಾ ಹಿನ್ನೆಲೆ ಈ ಬಾರಿ ಕೇವಲ 5,000 ಭಕ್ತರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ ದೇವಸ್ಥಾನ ಮಂಡಳಿಯ ಅಧ್ಯಕ್ಷ ಎನ್.ವಾಸು, ಅಯ್ಯಪ್ಪಸ್ವಾಮಿಯ ನಯಾಭಿಷೇಕ (ತುಪ್ಪದ ಅಭಿಷೇಕ) ಸೇವೆ ಜ.18ಕ್ಕೆ ಮುಕ್ತಾಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಮಕರ ಜ್ಯೋತಿ ದರ್ಶನ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಜಿಲೆಯನ್ನು 13 ವಿವಿಧ ವಲಯಗಳನ್ನಾಗಿ ವಿಂಗಡಿಸುವ ಮೂಲಕ ಭಕ್ತರ ವಾಹನಗಳ ಸಂಚಾರಕ್ಕೆ ಪೊಲಿಸರು ಅನುವು ಮಾಡಿಕೊಟ್ಟಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ದೇವಾಲಯ ಸುತ್ತಮುತ್ತಲಿನಲ್ಲಿ 6 ವಿಭಾಗಗಳಲ್ಲಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ.
ಶಬರಿಮಲೆ ವಾರ್ಷಿಕ ತೀರ್ಥಯಾತ್ರೆಯ ಮೊದಲ 54 ದಿನಗಳಲ್ಲಿ 1.34 ಲಕ್ಷ ಭಕ್ತರು ಆಗಮಿಸಿದ್ದು, ದೇವಾಲಯಕ್ಕೆ ಸುಮಾರು ₹ 16.30 ಕೋಟಿ ಆದಾಯ ಬಂದಿದೆ. ಕಳೆದ ವರ್ಷ ಮಕರ ಸಂಕ್ರಾಂತಿ ಹೊತ್ತಿಗೆ ಸುಮಾರು ₹ 60.26 ಕೋಟಿ ರೂ ಆದಾಯ ಗಳಿಸಿತ್ತು. ಸದ್ಯ ದೇಗುಲದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟ ಕಾರಣ ₹ 100 ಕೋಟಿ ಹಣದ ನೆರವನ್ನು ರಾಜ್ಯ ಸರ್ಕಾರದಿಂದ ಪಡೆಯಲಾಗುತ್ತದೆ ಎಂದು ಎನ್.ವಾಸು ಮಾಹಿತಿ ನೀಡಿದ್ದಾರೆ.