ಧರ್ಮಸ್ಥಳ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ನಿರ್ಮಾಣದ ನಿಧಿಗೆ ಧರ್ಮಸ್ಥಳ ಕ್ಷೇತ್ರದಿಂದ 25 ಲಕ್ಷ ರೂಪಾಯಿ ನಿಧಿ ಸಮರ್ಪಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣೆ ಅಭಿಯಾನದ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ಅಯೋಧ್ಯೆಯಲ್ಲಿ ಐತಿಹಾಸಿಕವಾಗಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣ ಅಭಿಯಾನ ಆರಂಭವಾಗಿದೆ. ದೇಶದ ಪ್ರತಿಯೊಬ್ಬ ಭಕ್ತರ ಪಾಲು ಬೇಕು ನಿಟ್ಟಿನಲ್ಲಿ ಮಂದಿರ ನಿರ್ಮಾಣ ಕಾರ್ಪೊರೇಟ್ ಮಂದಿರ ಆಗದೆ ಜನತಾ ರಾಮ ಮಂದಿರ ಆಗಬೇಕು ಎಂಬುದೇ ಎಲ್ಲರ ಆಶಯವಾಗಿದೆ.
ಈ ನಿಟ್ಟಿನಲ್ಲಿ ಧರ್ಮಸ್ಥಳ ಕ್ಷೇತ್ರದಿಂದ 25 ಲಕ್ಷ ರೂ. ನಿಧಿ ಸಮರ್ಪಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪ್ರಕಟಿಸಿದ್ದಾರೆ. ಶ್ರೀ ಮಂಜುನಾಥ ನ ಸನ್ನಿಧಿಯಲ್ಲಿ ಶ್ರೀ ರಾಮನ ನಿಧಿ ಸಮರ್ಪಣಾ ಅಭಿಯಾನ ಆರಂಭವಾಗಿದೆ. ನಾನು 1969ರಿಂದ ವಿಹಿಂಪ ಸಂಪರ್ಕದಲ್ಲಿದ್ದೇನೆ. ಪೇಜಾವರ ಹಿರಿಯ ಯತಿಗಳಾಗಿದ್ದ ಶ್ರೀ ವಿಶ್ವೇಶ ತೀರ್ಥರ ಸ್ಮರಣೆಯೊಂದಿಗೆ ಅವರ ಆಶಯ ಈಡೇರಿಸುವೆಡೆಗೆ ಕ್ಷೇತ್ರದಿಂದ ಇದೀಗ 25 ಲಕ್ಷ ರೂ. ನಿಧಿ ಸಮರ್ಪಣೆ ಮಾಡಲಿದ್ದು ಮುಂದಿನ ದಿನಗಳಲ್ಲೂ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.