ಉಡುಪಿ: ತೆಂಗಿನ ಎಣ್ಣೆ ಮಿಲ್ ನಲ್ಲಿ ಅಗ್ನಿ ಅನಾಹುತ ಸಂಭವಿಸಿ, ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಪಡುಬಿದ್ರೆಯ ಕಣ್ಣಂಗಾರ್ ಬೈಪಾಸ್ ಬಳಿಯ ನಡ್ಸಾಲು ಗ್ರಾಮದಲ್ಲಿ ನಡೆದಿದೆ. ಸುಶೀಲಾ ಗಾಣಿಗ ಮಾಲೀಕತ್ವದ ಗಾಣಿಗರ ಮಿಲ್ ನಲ್ಲಿ ಇಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದೆ ಎನ್ನಲಾದ ಈ ಅಗ್ನಿ ಅವಘಡದಲ್ಲಿ ಸುಮಾರು 5 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಕೊಬ್ಬರಿ, ತೆಂಗಿನ ಕಾಯಿ ಬೆಂಕಿಗಾಹುತಿಯಾಗಿದೆ. ಉಡುಪಿಯ ಅಗ್ನಿ ಶಾಮಕ ದಳ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸಲಾಗಿದೆ.
ಕೊಬ್ಬರಿ ಒಣಗಿಸಲು ಮಾಮೂಲಿಯಂತೆ ನಿನ್ನೆ ರಾತ್ರಿ ಕೂಡಾ ಅಣಿಗೊಳಿಸಿ ತೆರಳಿದ್ದರು. ಮಾಲೀಕರಿಗೆ ಮುಂಜಾನೆ ಸ್ಥಳೀಯರು ಈ ಅವಘಡದ ಸುದ್ದಿ ಮುಟ್ಟಿಸಿದ್ದಾರೆ. ಗೋಡೌನ್ ನಲ್ಲಿ ತೆಂಗಿನ ಕಾಯಿ ದಾಸ್ತಾನು ತುಂಬಿತ್ತು. ಇದೂ ಸಹ ಒಣ ತೆಂಗಿನಕಾಯಿಗಳಾದ್ದರಿಂದ ಬೆಂಕಿ ಹೊತ್ತಿ ಉರಿಯಲು ಸಹಕಾರಿಯಾಗಿದೆ. ಗೋಡೌನ್ ಗೋಡೆಯೂ ಬಿರುಕು ಬಿಟ್ಟಿದ್ದು ಅಲ್ಲಿಂದ ತೆಂಗಿನ ಕಾಯಿಗಳ ತೆರವು ಕಾರ್ಯವನ್ನೂ ನಡೆಸಲಾಗಿದೆ. ಇದೇ ವೇಳೆ ಪಡುಬಿದ್ರಿಯ ಪೊಲೀಸ್ ಠಾಣೆ ಸಮೀಪದ ಅಂಗಡಿಯೊಂದರಲ್ಲೂ ಬೆಂಕಿ ಹತ್ತಿಕೊಂಡಿದೆ. ಅದನ್ನೂ ಉಡುಪಿಯ ಅಗ್ನಿಶಾಮಕ ದಳದ ಸಿಬಂದಿ ಬಂದು ನಂದಿಸಿದ್ದಾರೆ.


