
ಉಡುಪಿ: ಪೆರ್ಡೂರಿನ ಪದ್ಮ ಕಮಲ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದಲ್ಲಿ (ರಿ) ಸಾರ್ವಜನಿಕರ ಹಾಗೂ ವಿವಿಧ ಸಂಘಗಳ ಸುಮಾರು 23 ಲಕ್ಷ ರೂಪಾಯಿ ಹಣವನ್ನು ವಂಚಿಸಿದ ದಂಪತಿಯನ್ನು ಹಿರಿಯಡಕ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿಯಾಗಿದ್ದ ಸುಗಂಧಿ ಮತ್ತು ಆಕೆಯ ಪತಿ ಸಂತೋಷ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿ ಸುಗಂಧಿ 2023 ರಿಂದ 2025 ರ ಅವಧಿಯಲ್ಲಿ ವಿವಿಧ ಸಂಘಗಳು ಮರುಪಾವತಿ ಮಾಡಿದ ಸಾಲದ ಹಣವನ್ನು ರಿಜಿಸ್ಟರ್ನಲ್ಲಿ ಮಾತ್ರ ನಮೂದಿಸಿ, ಒಕ್ಕೂಟದ ಅಧಿಕೃತ ಬ್ಯಾಂಕ್ ಖಾತೆಗೆ ಜಮೆ ಮಾಡದೆ ಪತಿಯೊಂದಿಗೆ ಸೇರಿ ಸ್ವಂತ ಬಳಕೆಗೆ ಉಪಯೋಗಿಸುತ್ತಿದ್ದರು.
ಅಷ್ಟೇ ಅಲ್ಲದೆ, ಒಕ್ಕೂಟದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ನಕಲಿ ಸಹಿಗಳನ್ನು ಸೃಷ್ಟಿಸಿ, ಒಕ್ಕೂಟದ ಚೆಕ್ಗಳ ಮೂಲಕ ಬ್ಯಾಂಕ್ನಿಂದ ಹಣವನ್ನು ಡ್ರಾ ಮಾಡಿಕೊಳ್ಳುತ್ತಿದ್ದರು. ಈ ಭಾರಿ ವಂಚನೆ ಲೆಕ್ಕಪರಿಶೋಧನೆ ವೇಳೆ ಅಥವಾ ಕಾರ್ಯಕಾರಿ ಸಮಿತಿಗೆ ಸಿಕ್ಕಿಬೀಳಬಾರದು ಎಂಬ ಕಾರಣಕ್ಕೆ, ಬೇರೆ ಸದಸ್ಯರಿಗೆ ತೋರಿಸಲು ನಕಲಿ ಸಾಲದ ಖಾತೆ ಪುಸ್ತಕಗಳನ್ನು ನಿರ್ವಹಣೆ ಮಾಡುತ್ತಿದ್ದರು.
ಈ ನಂಬಿಕೆ ದ್ರೋಹದ ವಿರುದ್ಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಕೆ.ಯು. ಅವರ ನಿರ್ದೇಶನದಂತೆ ಪಿ.ಎಸ್.ಐ ಪುನೀತ್ ಕುಮಾರ್, ಪಿ.ಎಸ್.ಐ ವಿಠಲ ಮಲವಡಕರ ಹಾಗೂ ಸಿಬ್ಬಂದಿ ಕಾರ್ತಿಕ್ ಅವರನ್ನೊಳಗೊಂಡ ತಂಡವು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಹಿರಿಯಡಕ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.


