ಗುಜರಾತ್: ಇಲ್ಲಿನ ರಾಜ್ಕೋಟ್ನ ಉದಯ ಶಿವಾನಂದ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಅನಾಹುತ ನಡೆದಿದೆ. ಐವರು ಕೊರೊನಾ ರೋಗಿಗಳು ಅಗ್ನಿ ಅವಘಡಕ್ಕೆ ಬಲಿಯಾಗಿದ್ದಾರೆ. ಘಟನೆ ನಡೆಯೋ ವೇಳೆ ಆಸ್ಪತ್ರೆಯಲ್ಲಿ 33 ಮಂದಿ ಕೊರೊನಾ ಸೋಂಕಿತರಿದ್ದರು. ಈ ಪೈಕಿ ಐವರು ಅಗ್ನಿ ದುರಂತಕ್ಕೆ ಪ್ರಾಣ ತೆತ್ತಿದ್ದಾರೆ.
ಇನ್ನು ಘಟನೆ ನಡೆಯುತ್ತಿದ್ದಂತೆಯೇ ಮಾಹಿತಿ ಅರಿತ ಅಗ್ನಿಶಾಮದಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಕಿಟಕಿ ಮೂಲಕ ಉಳಿದವರನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೆ ಅವರನ್ನು ಬೇರೊಂದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಘಟನೆ ಸಂಬಂಧ ತನಿಖೆ ನಡೆಸುವಂತೆ ಹಾಗೂ ಘಟನೆಗೆ ಕಾರಣವೇನು ಎಂಬುದನ್ನು ತಿಳಿದು ವರದಿ ನೀಡುವಂತೆ ಆದೇಶಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಅಗ್ನಿ ಅವಘಡ ಸಂಭವಿಸುವುದು ಇದೇ ಮೊದಲಲ್ಲ. ಈ ಹಿಂದೆಯೂ ಗುಜರಾತ್ ನ ಕೆಲವು ಆಸ್ಪತ್ರೆಗಳಲ್ಲಿ ಇಂತಹ ಅವಘಡಗಳು ನಡೆದಿವೆ. ಆಗಸ್ಟ್ 6 ರಂದು ಅಹಮ್ಮದಾಬಾದ್ ಆಸ್ಪತ್ರೆ, ಆಗಸ್ಟ್ 25ರಂದು ಜಾಮ್ ನಗರ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.


