ಬಂಟ್ವಾಳ: ಅಮೆರಿಕದ ಹ್ಯೂಸ್ಟನ್ ನಗರದಲ್ಲಿ ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡ ಶ್ರೀಕೃಷ್ಣ ವೃಂದಾವನಕ್ಕೆ ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಗ್ರಾಮದ ಕಂದೂರು ಸತ್ಯಶ್ರೀ ಕಲಾ ಬಳಗ ತಂಡದಿಂದ ಫೈಬರ್ ಮೋಲ್ಡ್ ‘ಕಡೆಗೋಲು ಶ್ರೀಕೃಷ್ಣ’ ವಿಗ್ರಹ ಸಿದ್ಧಗೊಳ್ಳುತ್ತಿದೆ.
ಪುತ್ತಿಗೆ ಸ್ವಾಮೀಜಿ ಮತ್ತು ಅಲ್ಲಿನ ಪ್ರಧಾನ ಅರ್ಚಕ ರಘುರಾಮ ಭಟ್ ಬೆಳ್ಳಾರೆ ಸೂಚನೆಯಂತೆ ಕಲಾವಿದ ಕೇಶವ ಸುವರ್ಣ ಅವರಿಂದ ಈ ವಿಗ್ರಹ ಸಿದ್ಧಗೊಳ್ಳುತ್ತಿದೆ. ಇದರೊಂದಿಗೆ ಉಡುಪಿ ರಥಗೋಪುರ, ಅಷ್ಟಭುಜ ದುರ್ಗೆ, ಮಹಿಷಾಸುರ, ಚಂಡ-ಮುಂಡರು, ಮೆರವಣಿಗೆ ಬಿರುದಾವಳಿ ಮತ್ತು ತಟ್ಟೆರಾಯ ಕೂಡ ನಿರ್ಮಾಣಗೊಳ್ಳುತ್ತಿವೆ.
ಸೋಮವಾರ ಇಲ್ಲಿಗೆ ಭೇಟಿ ನೀಡಿದ ವೃಂದಾವನ ಸಹಾಯಕ ಅರ್ಚಕ ಬಾಲಕೃಷ್ಣ ಭಟ್ ಹೆಜಮಾಡಿ ಮತ್ತು ಸಂಘಟಕ ಸುಹಾಸ್ ಐತಾಳ್ ವಿಗ್ರಹ ಪರಿಶೀಲಿಸಿದರು. ಕಲಾವಿದ ಕೇಶವ ಸುವರ್ಣ ಅವರು ಈಗಾಗಲೇ ಸಾಲುಮರದ ತಿಮ್ಮಕ್ಕ ಉದ್ಯಾನಕ್ಕೆ ವಿವಿಧ ಕಲಾಕೃತಿಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ.