ಮಂಗಳೂರು: ಫೆ.18ರಂದು ಸಂಜೆ 4.30 ಗಂಟೆಗೆ ಉರ್ವ ಮೈದಾನದಲ್ಲಿ ಕೋಟಿ ಚೆನ್ನಯ ಸೇವಾ ಬ್ರಿಗೇಡ್ ಆಶ್ರಯದಲ್ಲಿ ‘ಕೋಟಿ ಚೆನ್ನಯ ಟ್ರೋಫಿ’ ಪುರುಷರು ಮತ್ತು ಮಹಿಳೆಯರ ರಾಜ್ಯ ಮಟ್ಟದ ಮತ್ತು ಕಾಸರಗೋಡು ಜಿಲ್ಲೆಯ ಸ್ಪರ್ಧಿಗಳಿಗೆ ಮುಕ್ತ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಾರಥ್ಯ ವಹಿಸಿರುವ ಮಹಾನಗರ ಪಾಲಿಕೆ ಸದಸ್ಯ ಕಿರಣ್ ಕೋಡಿಕಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಲೆವಲ್ ಮಾದರಿಯಲ್ಲಿ ಈ ಸೀಸನ್-2 ಸ್ಪರ್ಧೆ ನಡೆಯಲಿದ್ದು, ಉಳಿಕೆಯ ಹಣದಲ್ಲಿ ಆಯ್ದ ಸೇವಾಶ್ರಮಕ್ಕೆ ಆರ್ಥಿಕ ನೆರವು, ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತ ಕೆಲವರಿಗೆ ವೈದ್ಯಕೀಯ ಸಲಕರಣೆ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಠಾಧೀಶ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅರ್ಎಸ್ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹಕ ಪ್ರಕಾಶ್ ಪಿ.ಎಸ್. ಉದ್ಘಾಟಿಸುವರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಸಂಸದ ನಳಿನ್ಕುಮಾರ್ ಕಟೀಲ್ ಮತ್ತಿತರರು ಭಾಗವಹಿಸುವರು.
ಈ ಸಂದರ್ಭದಲ್ಲಿ ‘ನಮ್ಮ ಮನೆಯ ಪುಟ್ಟ ರಾಮ’ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಉಮೇಶ್ ಮಲರಾಯಸಾನ, ಸದಾನಂದ್ ಅಂಚನ್, ದೇವಿಪ್ರಸಾದ್ ಶೆಟ್ಟಿ, ಆನಂದ ನಾಯಕ್ ಉಪಸ್ಥಿತರಿದ್ದರು.