ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕರಾವಳಿಯಲ್ಲಿ ಟೆಂಪಲ್ ರನ್ ನಲ್ಲಿ ತೊಡಗಿದ್ದಾರೆ. ನಿನ್ನೆ ಗೋಕರ್ಣಕ್ಕೆ ಭೇಟಿ ನೀಡಿದ್ದ ಈಶ್ವರಪ್ಪ ಇಂದು ಕೊಲ್ಲೂರು ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬಿಜೆಪಿ ಹಮ್ಮಿಕೊಂಡಿರುವ ರಾಜ್ಯ ಪ್ರವಾಸದಿಂದ ಕೂಡಾ ದೂರ ಉಳಿದಿರುವ ಕೆ.ಎಸ್. ಈಶ್ವರಪ್ಪ ದೇವಾಲಯಗಳಿಗೆ ಸುತ್ತು ಹಾಕುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದ ರಾಜ್ಯ ಪ್ರವಾಸದ ತಂಡದಲ್ಲಿ ಇರುವ ಈಶ್ವರಪ್ಪ, ರಾಜ್ಯ ಪ್ರವಾಸದ ಬದಲಾಗಿ ಕುಟುಂಬ ಸಮೇತ ದೇವಾಲಯ ಭೇಟಿಯಲ್ಲಿ ನಿರತರಾಗಿದ್ದಾರೆ.
ರಾಜೀನಾಮೆ ಬಳಿಕ ಹೊಸಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಗೂ ಗೈರಾಗಿದ್ದ ಈಶ್ವರಪ್ಪ, ಎರಡು ದಿನಗಳ ಕಾಲ ಕರಾವಳಿಯ ದೇವರ ಮೊರೆ ಹೋಗಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕೆ.ಎಸ್. ಈಶ್ವರಪ್ಪ ಕರಾವಳಿಯ ದೇವಸ್ಥಾನಗಳಿಗೆ ಭೇಟಿ ನೀಡಿದ್ದು, ಆದಷ್ಟು ಶೀಘ್ರ ಆರೋಪದ ಸುಳಿಯಿಂದ ಹೊರಬರುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.