ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿನೋದ್ ಕಾಂಬ್ಳಿ ಅವರನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ತಮ್ಮ ಚಟುವಟಿಕೆಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುವ ಕಾಂಬ್ಳಿ ಸಾಕಷ್ಟು ವಿವಾದಗಳನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ.ಮುಂಬೈ ಪೊಲೀಸರು ಈ ಮಾಜಿ ಟೀಂ ಇಂಡಿಯಾ ಬ್ಯಾಟ್ಸ್ಮನ್ನನ್ನು ಕುಡಿದ ಅಮಲಿನಲ್ಲಿ ಆಕ್ಸಿಡೆಂಟ್ ಮಾಡಿರುವ ಆರೋಪದ ಮೇಲೆ ಬಂಧಿಸಿದ್ದಾರೆ.
ಪೊಲೀಸರು ಕಾಂಬ್ಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಬಳಿಕ ಅವರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮಾಹಿತಿಯ ಪ್ರಕಾರ, ಫೆಬ್ರವರಿ 27 ರ ಭಾನುವಾರ ಮಧ್ಯಾಹ್ನ ಕಾಂಬ್ಳಿಯನ್ನು ಬಾಂದ್ರಾದ ಅವರ ಮನೆಯಿಂದ ಬಂಧಿಸಲಾಗಿದೆ. ಕಾಂಬ್ಳಿ ಅವರು ಮದ್ಯದ ಅಮಲಿನಲ್ಲಿ ಬಾಂದ್ರಾದ ತಮ್ಮ ರೆಸಿಡೆನ್ಶಿಯಲ್ ಸೊಸೈಟಿಯ ಗೇಟ್ನಲ್ಲಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದಾದ ಬಳಿಕ ಅಲ್ಲಿದ್ದ ಸೊಸೈಟಿಯ ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದು, ಸ್ಥಳೀಯರು ಪೊಲೀಸರಿಗೆ ದೂರು ನೀಡಿ ನಂತರ ಬಂಧಿಸಲಾಗಿದೆ.