ಬೆಳ್ತಂಗಡಿ : ತೆಂಗಿನಮರದ ಗರಿ ವಿದ್ಯುತ್ ಲೈನ್ ಗೆ ತಾಗಿಕೊಂಡಿದ್ದನ್ನು ತೆಗೆಯಲು ಮರ ಹತ್ತಿದಾಗ ವಿದ್ಯುತ್ ಪ್ರವಾಹಿಸಿ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಟಿ.ಬಿ.ಕ್ರಾಸ್ ಬಳಿ ನಡೆದಿದೆ.

ಟಿ.ಬಿ.ಕ್ರಾಸ್ ನಿವಾಸಿ ರಿಜ್ವಾನ್ (28) ತನ್ನ ಮನೆಯ ತೆಂಗಿನಮರದ ಗರಿ ವಿದ್ಯುತ್ ತಂತಿಗೆ ತಾಗಿಕೊಂಡಿದ್ದನ್ನು ನೋಡಿ ಇಂದು ಬೆಳಗ್ಗೆ ತೆಂಗಿನ ಗರಿ ಕೆಳಗೆ ಎಳೆದು ಹಾಕಲು ಮರ ಹತ್ತಿದ್ದಾಗ ವಿದ್ಯುತ್ ಪ್ರವಾಹಿಸಿ ಎಸೆಯಲ್ಪಟ್ಟು ಮನೆಯ ಅಂಗಳಕ್ಕೆ ಬಿದ್ದಿದ್ದಾನೆ. ತಕ್ಷಣ ರಿಜ್ವಾನ್ ಅಮ್ಮ ಬಂದು ಬೊಬ್ಬೆ ಹಾಕಿದ್ದಾರೆ ಅದಲ್ಲದೆ ಟ್ರಾನ್ಸ್ಫಾರಮ್ ಟ್ರೀಪ್ ಅಗಿ ಶಬ್ದ ಕೇಳಿಸಿದಾಗ ಪಕ್ಕದ ಮನೆಯಲ್ಲಿ ಫೈಂಟ್ ಕೆಲಸ ಮಾಡುತ್ತಿದ್ದ ಅಸೀಫ್ ಕುಂಟಿನಿ ಸ್ಥಳಕ್ಕೆ ಧಾವಿಸಿದ್ದಾನೆ.
ಪ್ರಾಣಹೋಗುವ ಪರಿಸ್ಥಿತಿಯಲ್ಲಿದ್ದ ರಿಜ್ಬಾನನ್ನು ಉಪಚರಿಸಿ 20 ನಿಮಿಷಗಳ ಕಾಲ ತನ್ನ ಬಾಯಿಯಿಂದ ರಿಜ್ವಾನ್ ಬಾಯಿಗೆ ಕೃತಕ ಉಸಿರಾಟ ನೀಡಿದಾಗ ಪ್ರಜ್ಞೆ ಬಂದಿದ್ದು ತಕ್ಷಣ ಸ್ಥಳೀಯರು ಸೇರಿ ಉಜಿರೆ ಬೆನಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯುತ್ ಪ್ರವಾಹದಿಂದ ಹೊಟ್ಟೆ ಭಾಗ ಸುಟ್ಟ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾನೆ ಎಂದು ಆಸ್ಪತ್ರೆಯ ವೈದ್ದರು ಮನೆಯವರಿಗೆ ತಿಳಿಸಿದ್ದಾರೆ.
ಅಸೀಫ್ ನ ಸಮಯ ಪ್ರಜ್ಞೆಯಿಂದ ರಿಜ್ವಾನ್ ಪ್ರಾಣ ಉಳಿದಿದ್ದು ಇದೀಗ ಅಸೀಫ್ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


