ಮಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಸವಾರರು/ಚಾಲಕರ ಮೇಲೆ ಮಂಗಳೂರು ಪೊಲೀಸರು ಹಮ್ಮಿಕೊಂಡಿರುವ ಆರು ದಿನಗಳ ವಿಶೇಷ ಕಾರ್ಯಾಚರಣೆ ಅ. 2ರಂದು ಕೊನೆಗೊಳ್ಳಲಿದೆ.
ಸೆ. 27ರಂದು ಕಾರ್ಯಾಚರಣೆ ಆರಂಭಗೊಂಡಿದ್ದು, ಒಂದೊಂದು ದಿನ ಒಂದೊಂದು ರೀತಿಯ ಉಲ್ಲಂಘನೆ ಪ್ರಕರಣಗಳನ್ನು ಕೇಂದ್ರೀಕರಿಸಿ ತಪಾಸಣೆ ನಡೆಸಲಾಗಿದೆ. ಮೊದಲ ನಾಲ್ಕು ದಿನಗಳಲ್ಲಿ ಟಿಂಟೆಡ್ ಗ್ಲಾಸ್, ನಂಬರ್ಪ್ಲೇಟ್ ದೋಷ, ಹೆಲ್ಮೆಟ್, ವಿಮೆ ತಪಾಸಣೆ ನಡೆದಿದ್ದು, 5ನೇ ದಿನವಾದ ಶುಕ್ರವಾರ ಹಳೆಯ ಪ್ರಕರಣಗಳ ಬಗ್ಗೆ ತಪಾಸಣೆ ನಡೆಸಿದರು.
ಈ ಹಿಂದೆ ಸಂಚಾರ ನಿಯಮ ಉಲ್ಲಂಘನೆ ಸಂದರ್ಭ ಸಿಸಿ ಕೆಮರಾಗಳಲ್ಲಿ ದಾಖಲಾಗಿದ್ದು, ಪೊಲೀಸರ ಮೊಬೈಲ್ನಲ್ಲಿ ದಾಖಲಾಗಿದ್ದು, ಸಾರ್ವಜನಿಕರೇ ದಾಖಲೆ ಸಮೇತ ದೂರು ನೀಡಿದ್ದು, ಸಹಿತ ಸಂಚಾರಿ ಪೊಲೀಸ್ ವಿಭಾಗದ ಆಟೋಮೇಶನ್ ಸೆಂಟರ್ನಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಪೊಲೀಸರು ನೋಟಿಸ್ ಕಳುಹಿಸಿದರೂ ದಂಡ ಪಾವತಿಸದೆ ನಿರ್ಲಕ್ಷಿಸಿದ ಸವಾರರು/ಚಾಲಕರಿಂದ ದಂಡ ವಸೂಲಿ ಮಾಡಲಾಯಿತು. ಶನಿವಾರ ಸಂಚಾರ ಪೊಲೀಸರು ವಾಹನಗಳ ಹೊಗೆ ತಪಾಸಣೆಯ (ಎಮಿಶನ್ ಟೆಸ್ಟ್) ದಾಖಲೆಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಳ್ಳಲಿದ್ದಾರೆ.
5.71 ಲ.ರೂ.ಗಳಿಗೂ ಅಧಿಕ ದಂಡ ವಸೂಲಿ ಶುಕ್ರವಾರದಂದು ಹಳೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಸಾವಿರಕ್ಕೂ ಅಧಿಕ ವಾಹನ ಸವಾರರು/ ಚಾಲಕರಿಂದ 5 .71 ಲ.ರೂ.ಗಳಿಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ.


