ಕುಂದಾಪುರ: ಕುಂದಾಪುರದಲ್ಲಿ ಮೊಬೈಲ್ ಶಾಪ್ ನಡೆಸುತ್ತಿರುವ ಯುವಕನನ್ನು ಆರು ಮಂದಿಯಿದ್ದ ತಂಡವೊಂದು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಅಹ್ಮದಾಬಾದ್ ನಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕೋಟೇಶ್ವರದ ನಿವಾಸಿ ಮುಕ್ತಾರ್ ಕೋಟೇಶ್ವರ(35) ಹಾಗೂ ದೆಹಲಿಯ ಬ್ಯೂಟಿ ಪಾರ್ಲರ್ ಮಾಡಿಕೊಂಡಿರುವ ಪ್ರಿಯಾಂಕಾ ಸಹಾನಿ (25) ಎಂದು ಗುರುತಿಸಲಾಗಿದೆ. ಹದಿನೈದು ದಿನಗಳ ಹಿಂದೆ ನಡೆದಿದ್ದ ಮೊಬೈಲ್ ಅಂಗಡಿ ಮಾಲಕನೊಬ್ಬನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು,ಇನ್ನುಳಿದ ಮೂವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ಅಂಗಡಿ ವ್ಯವಹಾರ ಮುಗಿಸಿ ಮನೆಗೆ ತೆರಳುತ್ತಿದ್ದ ಮುಸ್ತಾಫ್ ಅವರಿಂದ 4,64,0175 ರೂ. ಹಾಗೂ 1 ಲಕ್ಷ ಮೌಲ್ಯದ ಸೊತ್ತುಗಳು ಮತ್ತು ದಾಖಲಾತಿಗಳನ್ನು ಸುಲಿಗೆ ಮಾಡಿ ರಿವಾಲ್ವರ್ ತೋರಿಸಿ ಕಾರಿನಲ್ಲಿ ಅಪಹರಿಸಿ ಬೆಂಗಳೂರಿಗೆ ಕರೆದೊಯ್ದಿದ್ದರು. ಮೊಬೈಲ್, ದಾಖಲೆಗಳನ್ನು ತಮ್ಮಲ್ಲಿಯೇ ಇರಿಸಿಕೊಂಡ ಆರೋಪಿಗಳು ಸೆ.18ರಂದು ರಾತ್ರಿ 9:30ಕ್ಕೆ ಮುಸ್ತಾಫ್ ಅವರನ್ನು ಬಿಟ್ಟು ಕಳುಹಿಸಿದ್ದರು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಲೊಕೇಶನ್ ಆಧಾರದ ಮೇಲೆ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿಗೆ ತಲುಪಿದಾಗ ಆರೋಪಿಗಳು ದೆಹಲಿ ತಲುಪಿದ್ದರು. ತಕ್ಷಣ ಪೊಲೀಸರು ವಿಮಾನದಲ್ಲಿ ದೆಹಲಿಗೆ ಹೋಗಿದ್ದಾರೆ. ಆಗ ಅರೋಪಿಗಳು ಅಹ್ಮದಾಬಾದ್ ಕಡೆ ಪ್ರಯಾಣಿಸುತ್ತಿರುವುದು ಗೊತ್ತಾಗಿದೆ. ಬಳಿಕ ಪೊಲೀಸರು ಎರ್ಟಿಕಾ ಬಾಡಿಗೆ ಕಾರಿನಲ್ಲಿ ಫಾಲೋ ಮಾಡಿದ್ದಾರೆ. ಅದಾಗಲೇ ಆರೋಪಿಗಳು 1000 ಕಿ.ಮೀ ದೂರವಿದ್ದರು. ಅಹ್ಮದಾಬಾದಿನಲ್ಲಿ ಲೊಕೇಶನ್ ಚೆಕ್ ಮಾಡಿದಾಗ ಅಲ್ಲಿನ ಹೊಟೇಲ್ ನಲ್ಲಿರುವುದು ತಿಳಿದಿದ್ದು, ಇಬ್ಬರೂ ಒಂದೇ ರೂಮಿನಲ್ಲಿದ್ದರು ಎನ್ನಲಾಗಿದೆ. ಕುಂದಾಪುರ ಎಸೈ ಸದಾಶಿವ ಗೌರೋಜಿ, ಕೊಲ್ಲೂರು ಎಸೈ ನಾಸಿರ್ ಹುಸೇನ್, ಪೊಲೀಸ್ ಸಿಬ್ಬಂದಿಗಳಾದ ಸಂತೋಷ್, ಸತೀಶ್, ಸಚಿನ್, ಮಹಿಳಾ ಹೆಡ್ ಕಾನ್ಸ್ಟೇಬಲ್ ಚಂದ್ರವತಿ ತಂಡದ ಕಾರ್ಯಾಚರಣೆಯಲ್ಲಿ ಹೆಚ್ಚಿನ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಬ್ಬರು ಆರೋಪಿಗಳನ್ನು ಗುರುವಾರ ರಾತ್ರಿ ವಿಮಾನದಲ್ಲಿ ಬೆಂಗಳೂರಿಗೆ ಕರೆತಂದಿದ್ದು, ಶುಕ್ರವಾರ ಕುಂದಾಪುರಕ್ಕೆ ಕರೆತರಲಾಗಿತ್ತು. ಸಂಜೆ ವೇಳೆಗೆ ನ್ಯಾಯಾಧೀಶರೆದುರು ಹಾಜರುಪಡಿಸಲಾಗಿದೆ. ಸದ್ಯ ಇಬ್ಬರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನು ಉಳಿದ ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.