ಉಡುಪಿ: ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿರುವ ದುರ್ಗಾ ದೌಡ್ ಮೆರವಣಿಗೆ ಆರಂಭವಾಗಿದೆ. ಕೇಸರಿ ಮತ್ತು ಬಿಳಿ ಸಮವಸ್ತ್ರ ತೊಟ್ಟು ಸಾವಿರಾರು ಜನರು ದೌಡ್ ನಲ್ಲಿ ಭಾಗಿಯಾಗಿದ್ದು, ಕಡಿಯಾಳಿ ಮಹಿಷ ಮರ್ದಿನಿ ದೇಗುಲದಿಂದ ದುರ್ಗಾದೌಡ್ ಮೆರವಣಿಗೆಗೆ ಚಾಲನೆ ನೀಡಲಾಗಿದೆ.
ಮೆರವಣಿಗೆಯಲ್ಲಿ ಏಳು ಸಾವಿರಕ್ಕಿಂತಲೂ ಹೆಚ್ಚು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದು, ಉಡುಪಿ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿದೆ. ಮೆರವಣಿಗೆಯ ಬಳಿಕ ಸಂಜೆ ಕೃಷ್ಣಮಠದ ಸಮೀಪ ಬೃಹತ್ ಸಮಾವೇಶ ನಡೆಯಲಿದ್ದು, ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಪ್ರಧಾನ ಭಾಷಣ ಮಾಡಲಿದ್ದಾರೆ.
ಸಚಿವ ವಿ. ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್, ಶಾಸಕ ಸುಕುಮಾರ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭಾಗಿಯಾಗಿದ್ದು, ಮಹಾರಾಷ್ಟ್ರ ಕೇರಳದಿಂದ ಆಗಮಿಸಿರುವ ಕಲಾ ತಂಡಗಳು ಕೂಡಾ ಮೆರವಣಿಗೆಯಲ್ಲಿ ಭಾಗಿಯಾಗಿವೆ. ಮಹಾರಾಷ್ಟ್ರದಲ್ಲಿ ನವರಾತ್ರಿ ಸಂದರ್ಭದಲ್ಲಿ ದುರ್ಗಾದೌಡ್ ಕಾರ್ಯಕ್ರಮ ಪ್ರಚಲಿತದಲ್ಲಿದ್ದು, ಉಡುಪಿಯಲ್ಲಿ ಎರಡನೇ ವರ್ಷದ ದುರ್ಗಾದೌಡ್ ನಡೆಯುತ್ತಿದೆ.