ಬೆಳ್ತಂಗಡಿ: ಮಳೆಗಾಲ ಆರಂಭವಾಗಿ ಹಲವು ದಿನಗಳು ಕಳೆದರೂ ಎಚ್ಚರಗೊಳ್ಳದಿದ್ದ ರಾಷ್ಟ್ರೀಯ ಇಲಾಖೆ ಅಧಿಕಾರಿಗಳು ಕೊನೆಗೂ ಗುರುವಾರ ಜಾಗೃತವಾಗಿದ್ದು, ಉಜಿರೆ ಮುಖ್ಯ ರಸ್ತೆಯ ಚರಂಡಿ ಹೂಳು ತೆರವಿಗೆ ಮುಂದಾಗಿದೆ.
ತಾಲೂಕಿನಾದ್ಯಂತ ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಮಂಗಳೂರು ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಉಜಿರೆ ಜನಾರ್ದನ ಶಾಲೆಯ ಮುಂಭಾಗ ಚರಂಡಿ ತುಂಬಿ ರಸ್ತೆ ನದಿಯಂತಾಗಿತ್ತು. ಈ ಹಿಂದೆಯೂ ಇಂತಹ ಸಮಸ್ಯೆ ಉಂಟಾದಾಗ ಗ್ರಾ.ಪಂ. ಹೆದ್ದಾರಿ ಇಲಾಖೆಗೆ ನಿರ್ವಹಣೆ ಮಾಡುವಂತೆ ಸೂಚಿಸಿದ್ದರೂ ಅವಗಣಿಸಿತ್ತು. ಬಳಿಕ ಪಂಚಾಯತ್ ವತಿಯಿಂದಲೇ ಚರಂಡಿ ದುರಸ್ತಿಗೆ ಮುಂದಾದಾಗ ಇಬ್ಬರು ವರ್ತಕರು ತಮ್ಮ ಕಾಂಪೌಂಡ್ ಹಾನಿಯಾಗುತ್ತದೆ ತಗಾದೆ ಎತ್ತಿದ್ದರಿಂದ ಕಾಮಗಾರಿ ಸ್ಥಗಿತವಾಗಿತ್ತು.
ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಹೆದ್ದಾರಿ ಹೊಳೆಯಂತಾದ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಕಟವಾಗಿದ್ದು, ತತ್ಕ್ಷಣ ಜಾಗೃತಗೊಂಡ ಹೆದ್ದಾರಿ ಇಲಾಖೆ ಜೆಸಿಬಿ ಮೂಲಕ ಚರಂಡಿ ಸ್ವಚ್ಛತೆಗೆ ಮುಂದಾಗಿದೆ. ಉಜಿರೆ ಪೇಟೆ ಸಹಿತ ಸುಮಾರು 500 ಮೀ. ದೂರದ ವರೆಗೆ ರಸ್ತೆಯಲ್ಲೇ ನೀರು ಹರಿದ ಕಾರಣ ವಾಹನ ಸವಾರರು, ಪಾದಚಾರಿಗಳು ಯಾತನೆ ಅನುಭವಿಸಿದ್ದರು.ಇನ್ನು ಎರಡು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಇಲಾಖೆ ಭರವಸೆ ನೀಡಿದೆ ಎಂದು ವರದಿಯಾಗಿದೆ.