ತಮಿಳುನಾಡಿನ ಸಚಿವರೊಬ್ಬರ ನವವಿವಾಹಿತ ಪುತ್ರಿ ತನ್ನ ತಂದೆಯಿಂದ ರಕ್ಷಣೆ ಕೋರಿ ಬೆಂಗಳೂರು ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿದ ಎರಡು ದಿನಗಳ ನಂತರ, ಅವರು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ತನಗೆ ಮತ್ತು ತನ್ನ ಪತಿಗೆ ಪೊಲೀಸ್ ರಕ್ಷಣೆ ಕೋರಿದ್ದಾರೆ.
ಇದೀಗ ತಮಿಳುನಾಡು ಧಾರ್ಮಿಕ ಮತ್ತು ದತ್ತಿ ಸಚಿವ ಪಿ.ಸೇಕರ್ ಬಾಬು ಅವರ ಪುತ್ರಿ ಜಯಕಲ್ಯಾಣಿ (24) ತನ್ನ ಪತಿ ಸತೀಶ್ (27) ಅವರೊಂದಿಗೆ ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ಭೇಟಿಯಾಗಿದ್ದಾರೆ. ಹಾಗೇ ಜೀವ ರಕ್ಷಣೆ ಕೋರಿ ದಂಪತಿಗಳು ಜ್ಞಾನೇಂದ್ರ ಅವರಲ್ಲಿ ಮನವಿ ಮಾಡಿದರು.
ಎಂಬಿಬಿಎಸ್ ಪದವೀಧರೆ ಎಂದು ಪರಿಚಯಿಸಿಕೊಂಡ ಜಯಕಲ್ಯಾಣಿ, ಪರಸ್ಪರ ಒಪ್ಪಿಗೆ ಮೇರೆಗೆ ಸತೀಶ್ ಎಂಬಾತನನ್ನು ವಿವಾಹವಾಗಿರುವುದಾಗಿ ತಿಳಿಸಿದರು.
ತಮ್ಮ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ತಮ್ಮ ಪತಿಯ ವಿರುದ್ಧ ಸುಳ್ಳು ಪ್ರಕರಣಗಳನ್ನು ಹಾಕಲಾಗುತ್ತಿದೆ ಮತ್ತು ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದರು.
ನವವಿವಾಹಿತ ದಂಪತಿಗಳಿಗೆ ಆಶೀರ್ವಾದ ಮಾಡಿದ ಸಚಿವರು, ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರೊಂದಿಗೆ ಈ ವಿಷಯದ ಕುರಿತು ಮಾತನಾಡಿದರು.
ದಂಪತಿಗೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ ಸಚಿವರು, ಈ ಕುರಿತು ಪಂಥ್ ಅವರನ್ನು ಭೇಟಿಯಾಗುವಂತೆ ಸಲಹೆ ನೀಡಿದರು ಎಂದು ಸಚಿವರ ಕಚೇರಿ ತಿಳಿಸಿದೆ.