Tuesday, April 30, 2024
Homeಕರಾವಳಿಉಡುಪಿಉಡುಪಿ: ಮತ್ಸ್ಯ ಕ್ಷಾಮದಿಂದ ಮೀನುಗಾರರಿಗೆ ಬರೆ: ಮೀನೂಟ ಮಾಡುವವರಿಗೆ ದರದ ಹೊರೆ

ಉಡುಪಿ: ಮತ್ಸ್ಯ ಕ್ಷಾಮದಿಂದ ಮೀನುಗಾರರಿಗೆ ಬರೆ: ಮೀನೂಟ ಮಾಡುವವರಿಗೆ ದರದ ಹೊರೆ

spot_img
- Advertisement -
- Advertisement -

ಉಡುಪಿ: ಒಂದು ಕಡೆ ಡೀಸೆಲ್ ದರದಲ್ಲಿ ಏರಿಕೆ, ಮತ್ತೊಂದೆಡೆ ಕಡಲಿನಲ್ಲಿ ಮೀನಿನ ಲಭ್ಯತೆ ಇಳಿಕೆ, ಎರಡು ಕಾರಣದಿಂದ ಕರಾವಳಿ ಭಾಗದಲ್ಲಿ ಮತ್ಸ್ಯ ಕ್ಷಾಮ ಉಂಟಾಗಿದೆ. ಮೀನುಗಾರರಿಗೆ ಬರೆ ಎಳೆದಂತಾಗಿದ್ದು, ಮೀನೂಟ ಮಾಡುವವರಿಗೆ ದರದ ಹೊರೆ ಬಿದ್ದಿದೆ.

ಮಾರ್ಚ್ ಏಪ್ರಿಲ್ ತಿಂಗಳು ಬಂದ್ರೆ, ಸಮೃದ್ಧವಾಗಿ ಮೀನು ಸಿಗುವ ಸೀಸನ್ ಅನ್ನೋದು ನಂಬಿಕೆ. ಯಾಕಂದ್ರೆ ಮೇ ತಿಂಗಳ ಅಂತ್ಯ ಭಾಗದಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ರಜೆ ಶುರು ಆಗುತ್ತೆ. ಹಾಗಾಗಿ ಈ ಎರಡು ತಿಂಗಳು ಅತೀಹೆಚ್ಚು ಮೀನು ಹಿಡಿದು ಸಾಧ್ಯವಾದಷ್ಟು ಹಣ ಸಂಪಾದಿಸಲು ಮೀನುಗಾರರು ಹಾತೊರೆಯುತ್ತಾರೆ. ಆದರೆ ಈ ಬಾರಿ ಗಾಯದ ಮೇಲೆ ಬರೆ ಎಳೆದಂತಾ ಸ್ಥಿತಿ ಉಂಟಾಗಿದೆ. ಒಂದೆಡೆ ಪ್ರತಿದಿನ ಡೀಸೆಲ್ ಬೆಲೆ ಏರುತ್ತಿದೆ, ಹಾಗೂ-ಹೀಗೂ ಕಷ್ಟಪಟ್ಟು ಲೀಟರುಗಟ್ಟಲೆ ಡೀಸೆಲ್ ಹಾಕಿಕೊಂಡು ಕಡಲಿಗೆ ಇಳಿದರೆ, ಮೀನು ಸಿಗುತ್ತಿಲ್ಲ.

ಉಡುಪಿ ಜಿಲ್ಲೆಯ ಮಲ್ಪೆ ಗಂಗೊಳ್ಳಿ ಮರವಂತೆ ಬಹುತೇಕ ಎಲ್ಲಾ ಭಾಗಗಳಲ್ಲಿ  ಮೀನುಗಾರಿಕೆಯನ್ನೇ ಸ್ಥಗಿತಗೊಳಿಸಿದ್ದಾರೆ. ಕಳೆದ ಸುಮಾರು ಎರಡು ವಾರದಿಂದ ಮೀನುಗಾರಿಕೆಗೆ ತೆರಳಿದ ಬೋಟುಗಳು ಮೀನು ಸಿಗದೇ ವಾಪಸ್ ಆಗುತ್ತಿವೆ. ಸಿಕ್ಕಿದ ಮೀನನ್ನು ತಂದು ಮಾರಿದರೆ ಡೀಸೆಲ್ ದರ ಕೂಡ ಹುಟ್ಟುವುದಿಲ್ಲ ಎನ್ನುವ ನೋವು ಮೀನುಗಾರರದ್ದು!

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅಲ್ಪಸ್ವಲ್ಪ ಉತ್ತಮ ಮೀನುಗಾರಿಕೆ ಇತ್ತು. ಆದರೆ ಸೀಸನ್ ನ ಅಂತ್ಯಭಾಗದಲ್ಲಿ ಕಡಲು ಕೈಕೊಟ್ಟಿದೆ. ಉಡುಪಿ ಜಿಲ್ಲೆಯಲ್ಲಿ ಸಾವಿರದ ಆರುನೂರು ಡೀಸೆಲ್ ಸಬ್ಸಿಡಿಯುಕ್ತ ಬೋಟುಗಳಿವೆ. ಸದ್ಯದ ಸ್ಥಿತಿಯಲ್ಲಿ ಮಂಗಳೂರಿನಲ್ಲಿ ಮಾತ್ರ ಪರ್ಸೀನ್ ಬೋಟುಗಳು ಕಡಲಿಗೆ ಇಳಿಯುತ್ತಿವೆ. ಮಲ್ಪೆ ,ಗಂಗೊಳ್ಳಿ, ಕಾರವಾರ ಸಹಿತ ಬಹುತೇಕ ಕಡೆಗಳಲ್ಲಿ ಪರ್ಸೀನ್ ಬೋಟುಗಳು ಮೀನುಗಾರಿಕೆಯನ್ನೇ ಸ್ಥಗಿತ ಗೊಳಿಸಿವೆ. ನಾಡದೋಣಿಗಳು ಕೂಡ ಬಹುತೇಕ ದಿನಗಳಲ್ಲಿ ಮೀನುಗಾರಿಕೆಯನ್ನು ನಡೆಸುತ್ತಿಲ್ಲ.

ಈಗಾಗಲೇ ಮಾಂಸದ ದರ ಏರಿಕೆಯಾಗಿದೆ, ಮತ್ಸ್ಯಕ್ಷಾಮ ದಿಂದ ಮೀನೂಟ ಪ್ರಿಯರಿಗೂ ಸಮಸ್ಯೆ ಉಂಟಾಗಿದೆ. 1ಕೆಜಿ ಬಂಗುಡೆಗೆ ಈವರೆಗೆ ನೂರು ರೂಪಾಯಿ ಆಸುಪಾಸು ದರವಿತ್ತು. ಸದ್ಯದ ದರ 120 ರಿಂದ 140 ರೂಪಾಯಿ ಆಗಿದೆ. ಅಂಜಲ್ ಮೀನಿನ ಬೆಲೆ 700 ರುಪಾಯಿವರೆಗೂ ಹೆಚ್ಚಾಗಿದೆ. ಹರಾಜು ಕೇಂದ್ರದಲ್ಲಿ ಪಾಂಪ್ಲೆಟ್ ಮೀನಿನ ಬೆಲೆ ₹900. ಇದು ಸದ್ಯ ಮಾರುಕಟ್ಟೆಯಲ್ಲಿ ಸಾವಿರದ ನೂರು ರೂಪಾಯಿಗಳು ಹೆಚ್ಚಾಗಿದೆ. ಸಿಗಡಿ ಮೀನಿನ ದರ ಆಸುಪಾಸು 400 ರುಪಾಯಿ ತಲುಪಿದೆ.

ಮೀನುಗಾರಿಕೆಗೆ ಹೋದರೂ ಮೀನು ಸಿಗುತ್ತಿಲ್ಲ, ಬೋಟಿಗೆ 5 ರಿಂದ 6 ಸಾವಿರ ಲೀಟರ್ ಡೀಸೆಲ್ ಬೇಕಾಗುತ್ತೆ.  ಹತ್ತು ದಿನದಲ್ಲಿ ಡೀಸೆಲ್ ಬೆಲೆ ಐದರಿಂದ ಹತ್ತು ರೂಪಾಯಿ ಏರಿಕೆಯಾದರೂ ಕನಿಷ್ಠ 5000 ಲೀಟರಿಗೆ 50 ಸಾವಿರ ರೂಪಾಯಿ ಹೆಚ್ಚಳವಾಗುತ್ತದೆ. ಇಂತಹ ಕಷ್ಟದ ಸ್ಥಿತಿಯಲ್ಲಿ ಮೀನುಗಾರಿಕೆ ನಡೆಸುವುದು ಹೇಗೆ ಅನ್ನೋದು ಮೀನುಗಾರರ ಪ್ರಶ್ನೆ.

- Advertisement -
spot_img

Latest News

error: Content is protected !!