ಪುತ್ತೂರು : ದೇವಸ್ಥಾನಗಳ ಬ್ರಹ್ಮಕಲಶೋತ್ಸವಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಧಾರ್ಮಿಕತೆಯ ಜೊತೆಗೆ ವ್ಯಾಪಾರ-ವಹಿವಾಟಿಗೂ ದೇವಸ್ಥಾನಗಳ ಕಾರ್ಯಕ್ರಮಗಳಲ್ಲಿ ಅವಕಾಶವನ್ನು ಕಲ್ಪಿಸಲಾಗುವುದು ಸಾಮಾನ್ಯವೂ ಆಗಿದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಮಾತ್ರ ಕೊಂಚ ವಿನೂತನ ಚಿಂತನೆಗೂ ಅವಕಾಶ ನೀಡಲಾಗಿದೆ. ಕುಮಾರಧಾರಾ ನದಿ ತೀರದಲ್ಲೇ ಇರುವ ಈ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆದರೆ, ನದಿಯಲ್ಲಿ ಅಡ್ವೆಂಚರ್ ಬೋಟಿಂಗ್ ಗೂ ಅವಕಾಶವನ್ನು ಕಲ್ಪಿಸಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಿಹಿ ನೀರಿನಲ್ಲಿ ನಡೆದ ಮೊದಲ ಬೋಟಿಂಗ್ ಸಾಹಸ ಕ್ರೀಡೆಯಾಗಿಯೂ ಇದು ಎಂದು ಗುರುತಿಕೊಂಡಿದೆ. ಶಾಂತಿಮೊಗರು ಸುಬ್ರಹ್ಮಣ್ಯ ದೇವಸ್ಥಾನವನ್ನು ನವೀಕರಣಗೊಳಿಸಿದ ಬಳಿಕ ಇದೀಗ ಕ್ಷೇತ್ರದಲ್ಲಿ ಬ್ರಹ್ಮಕಲಶದ ಉತ್ಸವಗಳು ಆರಂಭಗೊಂಡಿದೆ. ಎಪ್ರಿಲ್ 5 ರಿಂದ ಎಪ್ರಿಲ್ 10 ರ ತನಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮವಿದ್ದು, ಈ ಸಂಭ್ರಮದ ಜೊತೆಗೆ ಗ್ರಾಮೀಣ ಭಾಗದ ಜನರಿಗೆ ಬೋಟಿಂಗ್ ಸಾಹಸ ಕ್ರೀಡೆಯಲ್ಲೂ ತೊಡಗಿಸಿಕೊಳ್ಳುವ ಅವಕಾಶವನ್ನೂ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ನೀಡಲಾಗಿದೆ.
ಬ್ರಹ್ಮಕಲಶೋತ್ಸವದ ಪ್ರಯುಕ್ತ ಎಪ್ರಿಲ್ 5 ರಿಂದ 10 ತನಕ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದರೆ, ದೇವಸ್ಥಾನದ ಪಕ್ಕದಲ್ಲೇ ಹರಿಯುವ ಕುಮಾರಧಾರಾ ನದಿಯಲ್ಲಿ ಗ್ರಾಮೀಣ ಭಾಗದ ಜನರಿಗಾಗಿ ವಿಶೇಷ ಬೋಟಿಂಗ್ ಸಾಹಸ ಕ್ರೀಡೆ ನಡೆಯುತ್ತಿದೆ.