ಕನಕಪುರ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಮೊಮ್ಮಗ ಹಾಗೂ ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ ಅವರ ಪುತ್ರ ಅಮಾರ್ತ್ಯ ರೊಂದಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ರ ಪುತ್ರಿ ಐಶ್ವರ್ಯರ ಮದುವೆಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ನಡೆದಿದೆ. ಈ ಹಿನ್ನೆಲೆ ಡಿಕೆಶಿ ಸ್ವಕ್ಷೇತ್ರ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಜನರಿಗೆ ಮದುವೆ ಉಡುಗೊರೆಯಾಗಿ ದುಬಾರಿ ಬೆಲೆಯ ಬಟ್ಟೆ ಹಾಗೂ ಸ್ವೀಟ್ ಬಾಕ್ಸ್ ಗಳನ್ನ ಡಿ.ಕೆ.ಬ್ರದರ್ಸ್ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ.
ರೇಡ್ ಅಂಡ್ ಟೇಲರ್ ಕಂಪನಿಯ ಪ್ಯಾಂಟ್, ಶರ್ಟ್ ಪುರುಷರಿಗೆ ನೀಡಲಾಗಿದೆ. ಬನ್ನಾರಸ್ ಕಂಪನಿಯ ದುಬಾರಿ ಸೀರೆ ಮಹಿಳೆಯರಿಗೆ ಉಡುಗೊರೆಯಾಗಿ ಕೊಡಲಾಗಿದೆ. ಕ್ಷೇತ್ರದ ಜನರಿಗೆ ಬಟ್ಟೆ ಮತ್ತು ಸೀರೆ ಉಡುಗೊರೆ ನೀಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಗಳ ಮದುವೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಕ್ಷೇತ್ರದ ಪ್ರತಿ ಗ್ರಾಮದ ಜನರಿಗೂ ಹಂಚಿಕೆ ಮಾಡಲಾಗಿದ್ದು, ಬರೋಬ್ಬರಿ 2.50 ಲಕ್ಷಕ್ಕೂ ಹೆಚ್ಚು ಜನರಿಗೆ ಮದುವೆ ಉಡುಗೊರೆ ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಒಂದು ಸೀರೆಗೆ 3500 ಯಿಂದ 5000 ಸಾವಿರ ಎಂದು ಅಂದಾಜಿಸಲಾಗಿದೆ, ಪ್ಯಾಂಟ್, ಶರ್ಟ್ ಗೆ 3 ರಿಂದ 4.500 ಸಾವಿರ ₹ ಎಂದು ಹೇಳಲಾಗ್ತಿದೆ. ಇದರ ಜೊತೆಗೆ ಹಿರಿಯರಿಗೆ ಪಂಚೆ, ಶರ್ಟ್ ಕೂಡ ಕೊಡಲಾಗಿದೆ. ಪ್ರತಿ ಗ್ರಾಮಕ್ಕೂ ಖುದ್ದಾಗಿ ಹೋಗಿ ಡಿಕೆಶಿ ಬೆಂಬಲಿಗರೇ ಉಡುಗೊರೆಯನ್ನ ಹಂಚಿಕೆ ಮಾಡಿದ್ದಾರೆ.
ಕೊರೋನಾ ಇಲ್ಲದಿದ್ದರೆ ಕ್ಷೇತ್ರದ ಜನರ ಸಮ್ಮುಖದಲ್ಲಿ ಸಂಭ್ರಮದಿಂದ ಮಗಳ ಮದುವೆ ಮಾಡಬೇಕು ಎಂದು ಕನಸು ಕಂಡಿದ್ದ ಶಿವಕುಮಾರ್ ಅವರು ಕನಕಪುರದಲ್ಲಿಯೇ ಅದ್ದೂರಿ ಕಾರ್ಯಕ್ರಮದ ಪ್ಲ್ಯಾನ್ ಮಾಡಿದ್ದರು. ಆದರೆ ಕೊರೋನಾ ಇರುವ ಹಿನ್ನೆಲೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮದುವೆ ಸಮಾರಂಭ ಮಾಡಲಾಗಿದೆ. ಹಾಗಾಗಿ ತಮ್ಮ ಇಚ್ಛೆಯಂತೆ ಕ್ಷೇತ್ರದ ಪ್ರತಿಯೊಂದು ಮನೆಗೂ ಸೀರೆ ಮತ್ತು ಬಟ್ಟೆ ಉಡುಗೊರೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ಜನರ ಮನೆಗೆ ಸೀರೆ ಮತ್ತು ಬಟ್ಟೆಯ ಜತೆಗೆ ಒಂದು ಸ್ವೀಟ್ ಬಾಕ್ಸ್ ಕಾಣಿಕೆಯಾಗಿ ಕೊಟ್ಟಿದ್ದಾರೆ.