ಬೆಂಗಳೂರು: ತಾಲೂಕು ಮತ್ತು ಜಿಲ್ಲಾ ಕ್ರೀಡಾಂಗಣಗಳು ಸೇರಿದಂತೆ ಕ್ರೀಡಾ ಇಲಾಖೆಯ ಎಲ್ಲಾ ಆಸ್ತಿಗಳನ್ನು ಸ್ವಚ್ಛತೆಯಿಂದಿಡಬೇಕು ಎಂದು ರೇಷ್ಮೆ,ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ಅವರು ಸೂಚಿಸಿದ್ದಾರೆ.
ಸಚಿವ ನಾರಾಯಣ ಗೌಡ ಸೂಚನೆ ಬಳಿಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸುತ್ತೋಲೆ ಹೊರಡಿಸಿದ್ದು, ಕ್ರೀಡಾಂಗಣಗಳು ಸೇರಿದಂತೆ ಇಲಾಖೆಯ ಸ್ವತ್ತುಗಳನ್ನು ಸಂರಕ್ಷಿಸಿ ಯಾವಾಗಲೂ ಸ್ವಚ್ಚತೆಯಿಂದ ನೋಡಿಕೊಳ್ಳಬೇಕು. ತಪ್ಪಿದ್ದಲ್ಲಿ ಸೂಕ್ತ ಶಿಸ್ತು ಕ್ರಮ ಜರುಗಿಸೋದಾಗಿ ತಿಳಿಸಲಾಗಿದೆ.
ಜಿಲ್ಲಾ ಮತ್ತು ತಾಲೂಕು ಕ್ರೀಡಾಂಗಣಗಳನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳುವುದು ಆಯಾ ಜಿಲ್ಲೆಯ ಸಹಾಯಕ ಉಪ ನಿರ್ದೇಶಕರ ಜವಾಬ್ದಾರಿ ಆಗಿರುತ್ತದೆ. ಆದರೆ ಸಚಿವ ನಾರಾಯಣಗೌಡ ಅವರು ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೊರಾಂಗಣ, ಒಳಾಂಗಣ ಕ್ರೀಡಾಂಗಣಗಳು, ಶೌಚಾಲಯ, ವಿದ್ಯಾರ್ಥಿ ನಿಲಯ ಕೊಠಡಿಗಳು, ಕಛೇರಿಗಳು ಸ್ವಚ್ಛವಾಗಿಲ್ಲದಿರುವುದನ್ನು ಗಮನಿಸಿ, ಸ್ವಚ್ಛತೆ ಕಾಪಾಡುವಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿ, ನಿರ್ಲಕ್ಷ್ಯ ತೋರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು.