ಕಾಡಾನೆಗಳ ನಿರಂತರ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಜೋತಾಡುವ ಸೌರ ಬೇಲಿಯ ಅನುಷ್ಠಾನಕ್ಕೆ ಮುಂದಾಗಿದೆ.
ದ.ಕ. ಜಿಲ್ಲೆಯ ಚಾರ್ಮಾಡಿ, ಶಿಶಿಲ, ಶಿಬಾಜೆ, ಶಿರಾಡಿ ಹಾಗೂ ಕೊಡಗು, ಚಿಕ್ಕಮಗಳೂರು, ಸಕಲೇಶಪುರ ಗಡಿಭಾಗದಲ್ಲಿ ಕಾಡಾನೆ ಉಪಟಳ ಮಿತಿ ಮೀರಿದೆ. ಕೃಷಿಯ ಜತೆಗೆ ಅನೇಕ ಜೀವಹಾನಿಯೂ ಸಂಭವಿಸಿದೆ.
ಈಗಾಗಲೇ ಇದನ್ನು ತಡೆಯಲು ಅರಣ್ಯ ಇಲಾಖೆಯು ಜೋತಾಡುವ ಸೌರಬೇಲಿ (Solar Powered Double line Hanging Fence) ಯನ್ನು ಚಿಕ್ಕಮಗಳೂರಿನ ಮೂಡಿಗೆರೆ ಹಾಗೂ ಶಿರಾಡಿ ಘಾಟಿ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ್ದು, ಪರಿಣಾಮಕಾರಿ ಎನಿಸಿರುವುದರಿಂದ ದ.ಕ. ಜಿಲ್ಲೆಯಲ್ಲಿ ಪ್ರಯೋಗವಾಗಿ ಬೆಳ್ತಂಗಡಿ ಹಾಗೂ ಸುಬ್ರಹ್ಮಣ್ಯದಲ್ಲಿ ಅನುಷ್ಠಾನ ಗೊಳಿಸಿದೆ ಎಂದು ತಿಳಿದು ಬಂದಿದೆ.
ಜೋತಾಡುವ ಬೇಲಿ ಹೇಗಿರುತ್ತದೆ: ಹ್ಯಾಂಗಿಂಗ್ ಸೋಲಾರ್ ಬೇಲಿಯು ಸುಮಾರು 14 ಅಡಿ ಎತ್ತರವಿದೆ. ಒಂದು ಕಂಬದಿಂದ ಒನ್ನೊಂದು ಕಂಬಕ್ಕೆ 80 ಅಡಿ ದೂರ. ಕಂಬದ ಮೇಲ್ಭಾಗದಿಂದ ವಿದ್ಯುತ್ ತಂತಿಯಂತೆ ಎರಡೂ ಬದಿ ತಂತಿ ಹಾದು ಹೋಗುತ್ತದೆ. ಆ ತಂತಿಗೆ ಎರಡು ಬದಿಯಲ್ಲಿ ನೆಲದವರೆಗೆ ತಂತಿಯನ್ನು ಇಳಿಯಬಿಟ್ಟು ಸುಮಾರು 9 ವೋಲ್ಟ್ನಷ್ಟು ಸೌರವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ.
ತಂತಿ ಅಳವಡಿಕೆಗೆ ಕಂಬವನ್ನು ಕಾಂಕ್ರೀಟ್ ಅಡಿಪಾಯದಿಂದ ನಿರ್ಮಿಸುವುದರಿಂದ ಬಲಿಷ್ಠ ಹಾಗೂ ಸುದೀರ್ಘ ಬಾಳಿಕೆ ಬರುತ್ತದೆ. ಸೋಲಾರ್ ಪವರ್ ಜನರೇಟರನ್ನು ಪ್ರತ್ಯೇಕವಾಗಿ ಅಳವಡಿಸಲಾಗುತ್ತದೆ. ತಂತಿಯ ಸ್ಪರ್ಶವಾದಾಗ ಲಘು ವಿದ್ಯುತ್ ಆಘಾತವಾಗುವುದರಿಂದ ಆನೆಗಳು ಮತ್ತೂಮ್ಮೆ ಆ ದಾರಿಯಲ್ಲಿ ಬರಲು ಹಿಂಜರಿಯುತ್ತವೆ. ಈ ವಿದ್ಯುತ್ನಿಂದ ಆನೆಗಳ ಜೀವಕ್ಕೆ ಅಪಾಯವಿಲ್ಲ. ಅವುಗಳ ಚಲನವಲನ ದಾಖಲಿಸಲು ಸಿಸಿ ಕೆಮರಾವನ್ನೂ ಅಳವಡಿಸಲಾಗಿದೆ. ಆನೆ ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶವೂ ರವಾನೆಯಾಗುತ್ತದೆ.