ಕೈಗಾರಿಕೋದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರಿಗೆ ಇಮೇಲ್ ಮೂಲಕ ಕೊಲೆ ಬೆದರಿಕೆ ಬಂದಿದ್ದು, ಕೊಲೆ ಬೆದರಿಕೆ ನೀಡಿರುವ ವ್ಯಕ್ತಿ 20 ಕೋಟಿ ರೂ. ಕೊಡಬೇಕು ಎಂದು ದೊಡ್ಡ ಮೊತ್ತದ ಬೇಡಿಕೆ ಇಟ್ಟಿದ್ದಾನೆ.
ಅ.27ರಂದು ಶಾದಾಬ್ ಖಾನ್ ಎಂಬ ಹೆಸರಿನಿಂದ ಇಮೇಲ್ ಬಂದಿದ್ದು, ‘ನೀವು ನಮಗೆ 20 ಕೋಟಿ ರೂಪಾಯಿ ನೀಡದಿದ್ದರೆ, ನಾವು ನಿಮ್ಮನ್ನು ಕೊಲ್ಲುತ್ತೇವೆ. ನಮ್ಮಲ್ಲಿ ಅತ್ಯುತ್ತಮ ಶೂಟರ್ಗಳಿದ್ದಾರೆ ಎಂದು ಎಚ್ಚರಿಸಿ ಬೆದರಿಕೆಯನ್ನೊಡ್ಡಿದ್ದಾರೆ. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆಯು ಮುಂದುವರಿದಿದೆ.
ಬಿಹಾರದ ವ್ಯಕ್ತಿಯೋರ್ವನನ್ನು ಕಳೆದ ವರ್ಷ ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸಿಕೊಂಡು ಅನಾಮಧೇಯ ಕರೆಗಳನ್ನು ಮಾಡಿದ್ದಕ್ಕಾಗಿ ಮುಂಬಯಿ ಪೊಲೀಸರು ಬಂಧಿಸಿದ್ದರು. ದಕ್ಷಿಣ ಮುಂಬಯಿಯಲ್ಲಿರುವ ಅಂಬಾನಿ ಕುಟುಂಬದ ನಿವಾಸ ಆಂಟಿಲಿಯಾದ ಜೊತೆಗೆ ಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಬಂದಿತ್ತು ಎನ್ನಲಾಗಿದೆ.