ಹಾಸನ: ಆಘಾತಕಾರಿ ಘಟನೆಯೊಂದರಲ್ಲಿ, ಕರ್ನಾಟಕದ ಹಾಸನ ಜಿಲ್ಲೆಯ ಅರಕಲಗೂಡು ಎಂಬಲ್ಲಿ ರಸ್ತೆಬದಿಯಲ್ಲಿ ಕಬ್ಬಿನ ಜ್ಯೂಸ್ ಮಾರಾಟ ಮಾಡುತ್ತಿದ್ದ ದಲಿತ ವ್ಯಕ್ತಿ ಮತ್ತು ಆತನ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ ಕೊಣನೂರು ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸ್ ದೂರಿನ ಪ್ರಕಾರ, ರುದ್ರಪಟ್ಟಣ ಗ್ರಾಮದ ನಿವಾಸಿ ಚಂದ್ರು (50) ಮತ್ತು ಅವರ 22 ವರ್ಷದ ಮಗ ನಿತಿನ್ ಕಳೆದ ಆರು ತಿಂಗಳಿಂದ ಗಾಡಿಯಲ್ಲಿ ಕಬ್ಬಿನ ಜ್ಯೂಸ್ ಮಾರಾಟ ಮಾಡುತ್ತಿದ್ದರು.
ಗಣಗೂರು ಗ್ರಾಮದ ಸುನೀಲ್ ಎಂಬ ವ್ಯಕ್ತಿ ಬಂದು ದಲಿತರು ತಯಾರಿಸಿದ ಕಬ್ಬಿನ ಜ್ಯೂಸ್ ಹೇಗೆ ಕುಡಿಯುತ್ತಾರೆ ಎಂದು ನಿಂದಿಸಿದ್ದಾನೆ.
ಚಂದ್ರು ತನ್ನ ವ್ಯವಹಾರವನ್ನು ಮುಂದುವರಿಸುವುದಾಗಿ ಹೇಳಿದ ನಂತರ ಸುನೀಲ್ ತನ್ನ ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಹಿಂತಿರುಗಿ ಚಂದ್ರು ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳು ಚಂದ್ರು ಅವರ ಪುತ್ರ ನಿತಿನ್ ಅವರಿಗೂ ಹೊಡೆದಿದ್ದಾರೆ. ಗಾಡಿಯಲ್ಲಿಟ್ಟಿದ್ದ ಕಬ್ಬಿನ ದಾಸ್ತಾನು ಬಿಸಾಡಲಾಗಿದೆ.
ಪ್ರಾಣ ಉಳಿಸಿಕೊಳ್ಳಲು ಸ್ಥಳದಿಂದ ಓಡಿಹೋಗಿ ಕೊಣನೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು ಎಂದು ಚಂದ್ರು ಪೊಲೀಸರಿಗೆ ತಿಳಿಸಿದ್ದಾರೆ.
ಚಂದ್ರು ಅವರು ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮತ್ತು ತಂದೆ-ಮಗನ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.