ಬೆಂಗಳೂರು ನಿನ್ನೆಯಷ್ಟೇ ಡಿ ಕೆ ರವಿ ಅವರ ತಾಯಿ ಗೌರಮ್ಮ ಅವರು ಸೊಸೆ ಕುಸುಮಾ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇಷ್ಟು ದಿನ ನಾವು ಬದುಕಿದ್ದೇವೋ ಇಲ್ವೋ ಅಂತಾ ನೋಡದ ಆಕೆ ಈಗ ನನ್ನ ಮಗನ ಹೆಸರು ಬಳಸಿಕೊಂಡು ರಾಜಕೀಯ ಮಾಡುತ್ತಿದ್ದಾಳೆ ಎಂದು ಕಿಡಿ ಕಾರಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಡಿ ಕೆ ರವಿ ಅವರ ಮಾವ, ಹನುಮಂತರಾಯಪ್ಪ ತಿರುಗೇಟು ಕೊಟ್ಟಿದ್ದಾರೆ.
ಡಿ.ಕೆ.ರವಿ ನನ್ನ ಮಗಳ ಗಂಡ. ನನ್ನ ಮಗಳು 25 ವರ್ಷಕ್ಕೇ ಗಂಡನನ್ನು ಕಳೆದುಕೊಂಡವಳು. ಗೌರಮ್ಮನವರಿಗೆ ಇನ್ನೊಬ್ಬ ಮಗ, ಮಗಳು, ಮೊಮ್ಮಕ್ಕಳು ಇದ್ದಾರೆ. ನನ್ನ ಮಗಳಿಗೆ ಈಗ ಯಾರಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಗೌರಮ್ಮ ಬ್ಲಾಕ್ ಮೇಲ್ ಮಾಡುವ ಕೆಲಸ ಬಿಡಲಿ. ನನ್ನ ಅಳಿಯ ತುಂಬ ಒಳ್ಳೆಯವನು. ಆತನನ್ನು ಬೀದಿಗೆ ತರಬಾರದು ಎಂದು ನಾನಂದುಕೊಂಡಿದ್ದೆ. ಆದರೆ ಇವರೇ ನಮ್ಮನ್ನು ಬೀದಿಗೆ ತರುತ್ತಿದ್ದಾರೆ. ಸಿಬಿಐ ರಿಪೋರ್ಟ್ ನೋಡಿ ಗೌರಮ್ಮ ಮಾತನಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಇದೆಲ್ಲದರ ಹಿಂದೆ ಮುನಿರತ್ನ ಕೈವಾಡ ಇದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ನಾನು ಅಭ್ಯರ್ಥಿ ಆಗುತ್ತೇನೆ ಎಂದು ಸ್ಕ್ರಿಪ್ಟ್ ರೆಡಿ ಮಾಡಿದ್ದ ಎಂದು ಆರೋಪಿಸಿದ್ದಾರೆ. ನಾನು ಟಿಕೆಟ್ ಆಕಾಂಕ್ಷಿಯಲ್ಲ. ನನ್ನ ಮಗಳಿಗೆ ಕೊಟ್ಟರೆ ಆಕೆಯ ಪರವಾಗಿ ಕೆಲಸ ಮಾಡುತ್ತೇನೆ. ಒಬ್ಬ ಗುರುವಾಗಿ ನಿಂತು ಕೆಲಸ ಮಾಡ್ತೀನಿ ಎಂದು ಹನುಮಂತರಾಯಪ್ಪ ತಿಳಿಸಿದ್ದಾರೆ.
ನಮ್ಮ ಮಗಳ ಭವಿಷ್ಯ ಹಾಳಾಯ್ತು. ಆದರೆ ಮಾನಕ್ಕೆ ಹೆದರಿ ಸುಮ್ಮನಿದ್ದೆವು. ಸೋಮವಾರ ಅಥವಾ ಮಂಗಳವಾರ ಸುದ್ದಿಗೊಷ್ಠಿ ನಡೆಸಿ, ಸಿಬಿಐ ವರದಿಯನ್ನು ಜನರ ಎದುರು ಇಡುತ್ತೇನೆ. ಗೌರಮ್ಮನವರು ಆಡುತ್ತಿರುವ ಮಾತಿನ ಹಿಂದೆ ಮುನಿರತ್ನ ಇದ್ದಾರೆ. ನಾವಿನ್ನು ಸುಮ್ಮನೆ ಕೂರೋದಿಲ್ಲ ಎಂದು ತಿಳಿಸಿದ್ದಾರೆ.