ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಬೀರೂರಿನ ಯರೇಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನದಂದು ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನು ಮರುಳಸಿದ್ದಪ್ಪ, ಹಾಗೂ ಚೈತನ್ಯ ಎನ್ನಲಾಗಿದೆ. ಸಂಭವಿಸಿದ ಸ್ಫೋಟದ ತೀವ್ರತೆಗೆ ಮನೆಯ ಛಾವಣಿ ಹೆಂಚುಗಳು ಹಾರಿದೆ.
ಘಟನೆಯ ಹಿನ್ನೆಲೆ: ಮರುಳಸಿದ್ದಪ್ಪ ಅಡುಗೆ ಮಾಡಲೆಂದು ಗ್ಯಾಸ್ ಸ್ಟೌವ್ ಹಚ್ಚಲು ಮುಂದಾದಾಗ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಗೆ ಬೆಂಕಿ ಹೊತ್ತಿಕೊಂಡಿದೆ. ಗಾಬರಿಗೊಂಡು ಹೊರಗೆ ಓಡುವಾಗ ಬಾಗಿಲ ಬಳಿ ಬರುವಷ್ಟರಲ್ಲಿಯೇ ಸಿಲಿಂಡರ್ ಸ್ಫೋಟಿಸಿ ಭುಜಕ್ಕೆ ಸುಟ್ಟ ಗಾಯವಾಗಿದ ಎಂದು ತಿಳಿದುಬಂದಿದೆ. ಸ್ಫೋಟದ ತೀವ್ರತೆಗೆ ಜಗುಲಿಯಲ್ಲಿ ಆಟವಾಡುತ್ತಿದ್ದ ಚೈತನ್ಯಾಳ ತಲೆಯ ಮೇಲೆ ಹೆಂಚುಗಳು ಬಿದ್ದು ಆಕೆಗೂ ಕೂಡ ಗಂಭೀರ ಗಾಯಗಳಾಗಿದೆ.
ಇನ್ನೂ ಘಟನೆ ನಡೆಯುತ್ತಿದ್ದಂತೆ ಅಗ್ನಿಶಾಮಕದಳಕ್ಕೆ ಸ್ಥಳೀಯರು ಕರೆ ಮಾಡಿ ತಿಳಿಸಿದ್ದು ಕೂಡಲೇ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಬೀರೂರು ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಹುಲ್ಲೇಹಳ್ಳಿ ಪಿಡಿಒ ಮಂಜುನಾಥ್ ಮತ್ತು ಗ್ರಾಪಂ ಸದಸ್ಯ ಎಂ.ಲಕ್ಷ್ಮಣಪ್ಪ ಹಾನಿ ಪರಿಶೀಲನೆ ನಡೆಸಿದ್ದಾರೆ.