ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಬದುಕಿರುವ ವ್ಯಕ್ತಿಯು ಸಾವನ್ನಪ್ಪಿದ್ದಾನೆ ಎಂದು ಆತನ ಮರಣ ಪತ್ರವನ್ನು ತಯಾರು ಮಾಡಿ ಅಕ್ರಮವಾಗಿ ಬೇರೊಬ್ಬ ವ್ಯಕ್ತಿಯ ಹೆಸರಿಗೆ ಖಾತೆಯನ್ನು ಬದಲಾವಣೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿನ ಕಡೂರು ತಾಲೂಕಿನ ಯಗಟಿ ಹೋಬಳಿಯ ನರಸೀಪುರ ಗ್ರಾಮದ ಸರ್ವೇ ನಂಬರ್ 21 ರಲ್ಲಿ ತಿಮ್ಮಯ್ಯ ಬಿನ್ ರಂಗಪ್ಪ ಯಗಟಿ ಹೋಳಿ ದೊಣ್ಣೆಕೋರನಹಳ್ಳಿ ಅವರು 03 ಎಕರೆ 37 ಗುಂಟೆ ಜಾಗವನ್ನು ಹೊಂದಿದ್ದು, ಅವರು ಬದುಕಿರುವಾಗಲೇ ಅಕ್ರಮವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೊಬ್ಬರ ಹೆಸರಿಗೆ ಇಲ್ಲಿನ ರಾಜಸ್ವ ನಿರೀಕ್ಷಕರಾದ ರಮೇಶ್ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅವರು ಹಣದ ಆಮಿಷಕ್ಕಾಗಿ ಯಾವುದೇ ಗ್ರಾಮಲೆಕ್ಕಿಗರ ವರದಿಯನ್ನು ಸ್ವೀಕರಿಸದೆ ನಕಲಿ ದಾಸ್ತಾವೇಜುಗಳನ್ನು ಸೃಷ್ಠಿಸಿ ಹಣಕ್ಕಾಗಿ ಬೇರೊಬ್ಬರ ಹೆಸರಿಗೆ ಪೌತಿಖಾತೆಯನ್ನು ದಾಖಲಿಸಿರುತ್ತಾರೆ ಎಂದು ಆರೋಪ ಮಾಡಲಾಗಿದೆ. ಈ ಕುರಿತು ಮಾನವ ಅಧಿಕಾರ ಪರಿಷದ್, ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಈ ಪ್ರಕರಣದ ಕುರಿತು ಸೂಕ್ತ ತನಿಖೆಯನ್ನು ನಡೆಸಿ, ಖಾತೆಯನ್ನು ರದ್ದುಗೊಳಿಸಿ ನೊಂದ ರೈತನಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಇದಲ್ಲದೆ ಈ ಹಿಂದೆ ನಡೆದ ಅಕ್ರಮ ಸಾಗುವಳಿ ಚೀಟಿಯಲ್ಲಿ ಈ ಅಧಿಕಾರಿಯ ಕೈವಾಡವಿದ್ದು ಅದರ ಬಳಿಕವೂ ಅದೇ ಸ್ಥಳದಲ್ಲಿ ಮುಂದುವರೆಯಲು ಬಿಟ್ಟಿರುವುದು ಮೇಲಧಿಕಾರಿಗಳ ನಿರ್ಲಕ್ಷಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ಈ ಘಟನೆಗೆ ಕಾರಣವಾದ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ ಎಂದು ತಿಳಿದುಬಂದಿದೆ.