ಮಂಗಳೂರು : 2021 ಜನವರಿ 18 ರಂದು ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ನಡು ಮುಡ್ಯೊಟ್ಟು ಎಂಬಲ್ಲಿ ತಂದೆಯನ್ನು ಸ್ವತಃ ಮಗನೇ ಕೊಲೆ ಮಾಡಿದ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪುತ್ರನ ಮೇಲಿನ ಆರೋಪ ಸಾಬೀತಾಗಿದೆ.
ಗರ್ಡಾಡಿ ಗ್ರಾಮದ ನಡು ಮುಡ್ಯೊಟ್ಟು ನಿವಾಸಿ ಶ್ರೀಧರ ಪೂಜಾರಿ (56) ಅವರನ್ನು ಪುತ್ರ ಹರೀಶ್ ಪೂಜಾರಿ (28) 2021 ಜನವರಿ 18 ರಂದು ಕೊಲೆ ಮಾಡಿದ್ದ. ಆರೋಪಿ ಹರೀಶ್ ಪೂಜಾರಿ ಬೇರೆ ಜಾತಿಯ ಹುಡುಗಿಯನ್ನು ಪ್ರೀತಿಸಿದ್ದ. ಅವರ ಮದುವೆಗೆ ಮನೆಯವರಿಂದ ವಿರೋಧವಿತ್ತು. ಅಲ್ಲದೇ ಹರೀಶನ ಸಹೋದರಿ ಮದುವೆ ಆಗದೆ ನಿನ್ನ ಮದುವೆ ಮಾಡುವುದಿಲ್ಲ ಎಂದು ಹರೀಶ್ ತಂದೆ ಶ್ರೀಧರ ಪೂಜಾರಿ ಹೇಳಿದ್ದರು. ಇದರಿಂದ ಮನೆ ಮಂದಿಯ ಜತೆ ಮನಸ್ತಾಪ ಹೊಂದಿದ್ದ ಹರೀಶ್ 2021 ಜನವರಿಯಲ್ಲಿ ತನ್ನ ಪ್ರೇಯಸಿ ಜತೆಗೆ ಮನೆ ಬಿಟ್ಟು ಹೋಗಿದ್ದ.
ಇದಾದ 3 ವಾರಗಳ ಬಳಿಕ ವಾಪಸ್ ಬಂದಾಗ ಆತನನ್ನು ಪ್ರೇಯಸಿಯ ಜತೆ ಮನೆಗೆ ಬರೋದಕ್ಕೆ ತಂದೆ ಆಕ್ಷೇಪಿಸಿದ್ದರು. ಜ. 18 ರಂದು ಮಧ್ಯಾಹ್ನ ಇದೇ ವಿಚಾರದಲ್ಲಿ ಪಕ್ಕದ ಮನೆಯ ಸಮೀಪ ಶ್ರೀಧರ್ ಪೂಜಾರಿ ಮತ್ತು ಮಗನ ಮಧ್ಯೆ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಹರೀಶ್ ತನ್ನ ತಂದೆ ಶ್ರೀಧರ ಪೂಜಾರಿ ಅವರಿಗೆ ಕೊಲೆ ಬೆದರಿಕೆ ಹಾಕಿ ಹೋಗಿದ್ದನು. ಬಳಿಕ ಅದೇ ದಿನ ಸಂಜೆ ತಂದೆ ಪೇಟೆಗೆ ಹೋಗಿ ಮನೆಗೆ ಬಂದಾಗ ಪುತ್ರ ಹರೀಶ್ ಮರದ ಪಕ್ಕಾಸಿನಿಂದ ತಂದೆಯ ತಲೆ ಮತ್ತು ಮುಖಕ್ಕೆ ಹೊಡೆದಿದ್ದನು. ಇದರಿಂದ ತೀವ್ರ ಗಾಯಗೊಂಡಿದ್ದ ಶ್ರೀಧರ್ ಪೂಜಾರಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನ್ನಪ್ಪಿದ್ದರು ಎಂದು ದೂರು ದಾಖಲಾಗಿತ್ತು.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಇನ್ಸ್ಪೆಕ್ಟರ್ ಸಂದೇಶ್ ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಮಂಗಳೂರಿನ 4ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್. ಪಲ್ಲವಿ ಅವರು ಕೈಗೆತ್ತಿಕೊಂಡು ಪೂರ್ಣಗೊಳಿಸಿದ್ದು, ಆರೋಪಿ ಹರೀಶ್ ಪೂಜಾರಿ ದೋಷಿ ಎಂಬುದಾಗಿ ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ಪ್ರಕಟಿಸ ಬೇಕಾಗಿದೆ