ಮಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆಗಾಗ್ಗೆ ಬಿಸಿಲು ಮತ್ತು ಮಳೆಯ ವಾತಾವರಣ ಇರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿವೆ. ಬಿಟ್ಟು ಬಿಟ್ಟು ಮಳೆ ಬರುವುದರಿಂದ ಅಲ್ಲಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿಆಗಿ ಮಲೇರಿಯಾ, ಡೆಂಗ್ಯೂ, ನೋರಾ ಮತ್ತು ಇತರ ವೈರಲ್ ಜ್ವರದ ಭೀತಿ ಇದೆ.
ಜಿಲ್ಲೆಯ ಗ್ರಾಮಾಂತರ ಭಾಗದ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳದಲ್ಲಿ ಡೆಂಗ್ಯೂ ಜಾಸ್ತಿ ಇದ್ದರೆ, ಮಂಗಳೂರು ನಗರದಲ್ಲಿ ಮಲೇರಿಯಾ ಜಾಸ್ತಿ ಇದೆ. 2021ರಲ್ಲಿ ಜಿಲ್ಲೆಯಲ್ಲಿ ಕಳೆದ 10 ತಿಂಗಳಲ್ಲಿ (ಅಕ್ಟೋಬರ್ ಅಂತ್ಯಕ್ಕೆ) 665 ಮಲೇರಿಯಾ ಮತ್ತು 247 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.
ಶೇ. 85 ಮಲೇರಿಯಾ ಪ್ರಕರಣಗಳು ಮಂಗಳೂರು ನಗರದಲ್ಲಿ ಹಾಗೂ ಶೇ. 85 ಡೆಂಗ್ಯೂ ಜ್ವರ ಗ್ರಾಮಾಂತರ ತಾಲೂಕುಗಳಲ್ಲಿ ಕಂಡು ಬರುತ್ತಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿ ಮೂಲಗಳು ತಿಳಿಸಿವೆ. ಈ ವರ್ಷ ಡೆಂಗ್ಯೂ ಮಂಗಳೂರು ನಗರದಲ್ಲಿ 54, ಮಂಗಳೂರು ಗ್ರಾಮಾಂತರ 56, ಬಂಟ್ವಾಳ 58, ಪುತ್ತೂರು 32, ಸುಳ್ಯ 26, ಬೆಳ್ತಂಗಡಿ 20 ಪ್ರಕರಣಗಳು ವರದಿಯಾಗಿವೆ.