ಬಳ್ಳಾರಿ : ಇಬ್ಬರೂ ಪತ್ನಿಯರೂ ತನ್ನನ್ನು ದೂರ ಮಾಡಿದ್ರು ಅಂತಾ ನೊಂದ ಪತಿಯೊಬ್ಬ ತೆಂಗಿನ ಮರವೇರಿದ ವಿಚಿತ್ರ ಘಟನೆಯೊಂದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಸಮೀಪದ ದಾಸೋಬನಹಳ್ಳಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ದೊಡ್ಡಪ್ಪ ತನ್ನಿಬ್ಬರ ಪತ್ನಿಯರ ಪೈಕಿ ಯಾರೊಬ್ಬರೂ ನನ್ನೊಂದಿಗೆ ಜೀವನ ಮಾಡುತ್ತಿಲ್ಲವೆಂದು ಬೇಸತ್ತು ನನಗೆ ಪತ್ನಿಯರು ಬೇಕೆಂದು ಹಠ ಹಿಡಿದು ತೆಂಗಿನ ಮರವೇರಿದ್ದಾನೆ.
ಸುಮಾರು 20 ವರ್ಷಗಳ ಹಿಂದೆ ದೊಡ್ಡಪ್ಪ ತನ್ನ ಸೋದರ ಸೊಸೆಯೊಂದಿಗೆ ಮೊದಲು ಮದುವೆಯಾಗಿದ್ದ. ಮಕ್ಕಳಾಗದ ಕಾರಣ ಮೊದಲ ಪತ್ನಿ ತವರು ಸೇರಿದ್ದಳು. ನಂತರ ಕೂಡ್ಲಿಗಿ ಸಮೀಪದ ಶಿವಪುರ ಗೊಲ್ಲರಹಟ್ಟಿಯ ಮಹಿಳೆಯೊಂದಿಗೆ 2ನೇ ಮದುವೆಯಾಗಿದ್ದ. ಎರಡನೇ ಪತ್ನಿಗೆ ಮೂರು ಗಂಡು ಮಕ್ಕಳಿದ್ದಾರೆ. ಆದರೆ ಗಂಡ-ಹೆಂಡತಿ ನಡುವಿನ ಮನಸ್ತಾಪದಿಂದ 5 ವರ್ಷಗಳ ಹಿಂದೆ ಮನೆ, ಮಕ್ಕಳನ್ನು ಬಿಟ್ಟು ಎರಡನೇ ಪತ್ನಿಯೂ ತವರು ಸೇರಿದ್ದಳು.
ಇದರಿಂದ ಬೇಸತ್ತ ದೊಡ್ಡಪ್ಪ ತನಗೆ ಪತ್ನಿಯರು ಬೇಕೆಂದು ಗೋಗರೆಯುತ್ತ ತೆಂಗಿನ ಮರವೇರಿದ್ದಾನೆ. ಬಳಿಕ ಗ್ರಾಮಸ್ಥರು ಖಾನಾ ಹೊಸಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೂ ಜಗ್ಗದಿದ್ದಾಗ ಪಿಎಸ್ಐ ಹೆಚ್.ನಾಗರಾಜ ಸ್ಥಳಕ್ಕೆ ಆಗಮಿಸಿ ವ್ಯಕ್ತಿಯೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಆದರೆ ಆತ ತನ್ನ ಮೊದಲ ಹೆಂಡತಿಯನ್ನು ಕರೆಯಿಸಿ ಎಂದು ಪಟ್ಟು ಹಿಡಿದು ಮರದಲ್ಲೇ ಕುಳಿತಿದ್ದಾನೆ ದೊಡ್ಡಪ್ಪ.
ನಂತರ ಪೊಲೀಸರು ದೊಡ್ಡಪ್ಪನ ಮೊದಲ ಹೆಂಡತಿಯನ್ನು ಮರದ ಬಳಿಗೆ ಕರೆಸಿ, ಅಗ್ನಿಶಾಮಕ ದಳದ ಸಿಬ್ಬಂದಿ ಸಹಕಾರದೊಂದಿಗೆ ದೊಡ್ಡಪ್ಪನನ್ನು ಮರದಿಂದ ಕೆಳಗಿಳಿಸಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.


