ಮಂಗಳೂರು: ನಿನ್ನೆ ನಗರದಲ್ಲಿ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ಕುದ್ರೋಳಿಯ ನವಾಜ್(21) ಬಂಧಿತ ಆರೋಪಿ. ಇನ್ನು ಹೆಡ್ ಕಾನ್ಸ್ ಟೇಬಲ್ ಗಣೇಶ್ ಕಾಮತ್ ಅವರಿಗೆ ಕತ್ತಿಯಿಂದ ಹಲ್ಲೆ ಮಾಡಿದ ಆರೋಪಿ 16 ವರ್ಷದ ಬಾಲಕ ತಲೆ ಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ನಿನ್ನೆ ಮಧ್ಯಾಹ್ನ ಬೈಕ್ ನಲ್ಲಿ ಬಂದಿದ್ದ ಇಬ್ಬರು ಯುವಕರು ಕಾರ್ ಸ್ಟ್ರೀಟ್ ಬಳಿಯ ನ್ಯೂ ಚಿತ್ರಾ ಟಾಕೀಸ್ ಮುಂಭಾಗದಲ್ಲಿ ನಿಂತಿದ್ದ ಪೊಲೀಸರ ಮೇಲೆ ಬೈಕ್ ನಲ್ಲಿ ಬಂದ ಇಬ್ಬರು ಹಲ್ಲೆಗೈದಿದ್ದರು. ಬೈಕ್ ನಲ್ಲಿ ಹಿಂಬದಿ ಕುಳಿತಿದ್ದ 16 ವರ್ಷದ ಬಾಲಕ ಕತ್ತಿಯಿಂದ ಹೆಡ್ ಕಾನ್ಸ್ ಟೇಬಲ್ ಕೈಗೆ ಕಡಿದು ಪರಾರಿಯಾಗಿದ್ದ. ಆರೋಪಿಗಳ ಪತ್ತೆಗಾಗಿ ಪೊಲೀಸ್ ಕಮೀಷನರ್ ವಿಶೇಷ ತಂಡ ರಚಿಸಿದ್ದರು. ಅದರಂತೆ ಖಚಿತ ಮಾಹಿತಿ ಮೇರೆಗೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿರುವ ಇನ್ನೋರ್ವ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.