ಕೋಲ್ಕತ್ತಾ: ಕೆಲವೊಮ್ಮೆ ಕಾರಣವೇ ಅಲ್ಲದ ಕಾರಣಗಳಿಗೆ ಹುಟ್ಟಿಕೊಳ್ಳುವ ಜಗಲ ಎಲ್ಲಿಂದ ಎಲ್ಲಿಗೋ ತಲುಪುತ್ತೆ. ಇದೇ ರೀತಿ ಕೋಲ್ಕತ್ತಾದಲ್ಲಿ ಹಳಸಿದ ಬಿರಿಯಾನಿ ಕೊಟ್ಟ ವಿಚಾರಕ್ಕೆ ಆರಂಭವಾದ ಜಗಳ ಸಾವಿನಲ್ಲಿ ಅಂತ್ಯಗೊಂಡಿದೆ.
ಫಲ್ಗುಣಿ ಬಸು ಎಂಬ ಮಹಿಳೆಯ ಮನೆಗೆ ಆಕೆಯ ಅತ್ತಿಗೆ ಬಂದಿದ್ದಳು. ಈ ವೇಳೆ ಫಲ್ಗುಣಿ ಬಿರಿಯಾನಿ ಮಾಡಿ ಬಡಿಸಿದ್ದಳು. ಇದನ್ನು ತಿಂದ ನಂತರದ ಫಲ್ಗುಣಿ ಅತ್ತಿಗೆಯ ಮಗ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದ. ಇದರಿಂದ ಸಿಟ್ಟಾದ ಮಹಿಳೆ ಫಲ್ಗುಣಿ ಮೇಲೆ ಕಿಡಿಕಾರಿದಳು.
ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಅತ್ತಿಗೆಯು ಫಲ್ಗುಣಿ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ವೇಳೆ ಇಬ್ಬರ ನಡುವೆ ಭಾರೀ ಹೊಡೆದಾಟ ಏರ್ಪಟ್ಟಿದೆ. ಅತ್ತಿಗೆ ಹೊಡೆದ ಏಟಿಗೆ ಫಲ್ಗುಣಿಗೆ ಹೃದಯಾಘಾತವಾಗಿದೆ. ಈ ವೇಳೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ.
ಫಲ್ಗುಣಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಆಕೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.