ಚಿಕ್ಕೋಡಿ: ಅನಾರೋಗ್ಯದಿಂದ ಮೃತಪಟ್ಟ ತಂದೆಯ ಅಂತ್ಯಕ್ರಿಯೆಗೆ ವಿದೇಶದಲ್ಲಿರುವ ಮಕ್ಕಳು ಬರದೇ ಇದ್ದ ಕಾರಣ ಪೊಲೀಸರು ಅಂತ್ಯಕ್ರಿಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ.
ಮಹಾರಾಷ್ಟ್ರ ರಾಜ್ಯದ ಪುಣೆ ಮೂಲದ 72 ವರ್ಷದ ಮೂಲಚಂದ್ರ ಶರ್ಮಾ ಎಂಬವರು ಪಾರ್ಶ್ವವಾಯುನಿಂದ ಬಳಲುತ್ತಿದ್ದು, ನಾಗರಮುನ್ನೋಳಿ ಕುಂಬಾರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಓರ್ವ ವ್ಯಕ್ತಿ ಕರೆ ತಂದಿದ್ದ ಎನ್ನಲಾಗಿದೆ.
ಕಾಂಟ್ರಾಕ್ಟ್ ಆಧಾರದಲ್ಲಿ ಮೂಲಚಂದ್ರ ಶರ್ಮಾ ಅವರನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ನಂತರ ಆಸ್ಪತ್ರೆಗೆ ಹತ್ತಿರದಲ್ಲಿದ್ದ ಶಿವನೇರಿ ಲಾಡ್ಡ್ನಲ್ಲಿ ಶರ್ಮಾ ಅವರನ್ನು ಇರಿಸಿದ್ದು ತನ್ನ ಕಾಂಟ್ರಾಕ್ಟ್ ಅವಧಿ ಮುಗಿದ ಬಳಿಕ ಲಾಡ್ಜ್ ನಲ್ಲೇ ಬಿಟ್ಟು ತೆರಳಿದ್ದ ಎನ್ನಲಾಗಿದೆ.
ಬಳಿಕ ಲಾಡ್ಜ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೂಲಚಂದ್ರ ಶರ್ಮಾರನ್ನು ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ಎರಡು ದಿನಗಳ ಹಿಂದೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೂಲಚಂದ್ರ ಶರ್ಮಾ ಸಾವನ್ನಪ್ಪಿದ್ದು, ಪುತ್ರ ಮತ್ತು ಪುತ್ರಿಗೆ ವಿಷಯ ತಿಳಿಸಲು ಪೊಲೀಸರು ಕರೆ ಮಾಡಿದಾಗ ನಮಗೂ ಅವರಿಗೆ ಸಂಬಂಧ ಇಲ್ಲ ಎಂದು ಮಗಳು ಕರೆ ಡಿಸ್ ಕನೆಕ್ಟ್ ಮಾಡಿದ್ದರು ಎನ್ನಲಾಗಿದೆ.ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಚಿಕ್ಕೋಡಿ ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.