ಚಿಕ್ಕಮಗಳೂರು; ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಧಾರದಲ್ಲಿ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ಶವವಾಹಿ ಪತ್ತೆಯಾಗಿದ್ದಾಳೆ. ಆ ಮೂಲಕ ಮಗಳು ಕ್ಷೇಮವಾಗಿ ವಾಪಾಸ್ ಬರ್ತಾಳೆ ಎಂದು ಕಾಯುತ್ತಿದ್ದ ಹೆತ್ತವರ ನಿರೀಕ್ಷೆ ಹುಸಿಯಾಗಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿವಾಸಿಯಾದ ಈ ಬಾಲಕಿ ಮಂಗಳವಾರ ಸಂಜೆ ಸುಮಾರು 5.30ರ ಹೊತ್ತಿಗೆ ಪ್ರವಾಸಿಗರ ಜನದಟ್ಟಣೆಯ ನಡುವೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ಮಗಳು ನಾಪತ್ತೆಯಾದ ತಕ್ಷಣವೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಕಳೆದ ಮೂರು ದಿನಗಳಿಂದ ದಟ್ಟವಾದ ಅರಣ್ಯ ಮತ್ತು ಕಡಿದಾದ ಬೆಟ್ಟಗುಡ್ಡಗಳಲ್ಲಿ ಬಾಲಕಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸಲಾಗಿತ್ತು.
ಅಗ್ನಿಶಾಮಕ ದಳ, ಪೊಲೀಸ್ ಮತ್ತು ಅರಣ್ಯ ಇಲಾಖೆಯ ತಂಡಗಳು ಜಂಟಿಯಾಗಿ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿದ ನಂತರ ಅಂತಿಮವಾಗಿ ಆಳವಾದ ಕಂದಕವೊಂದರಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಪ್ರವಾಸಕ್ಕೆಂದು ಬಂದು ತಮ್ಮ ಪ್ರೀತಿಯ ಮಗಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದ್ದು, ಇಡೀ ಪ್ರವಾಸದ ಸಂಭ್ರಮ ವಿಷಾದವಾಗಿ ಮಾರ್ಪಟ್ಟಿದೆ. ಬಾಲಕಿಯ ಸಾವು ಕಂದಕಕ್ಕೆ ಆಕಸ್ಮಿಕವಾಗಿ ಬಿದ್ದು ಸಂಭವಿಸಿದೆಯೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


