ಬೆಂಗಳೂರು: ಕೆಲಸ ಇಲ್ಲ ಅಂತಾ ಸೀರೆ ಉಟ್ಟುಕೊಂಡು ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಯುವಕನೊಬ್ಬ ಸಿಕ್ಕಿಬಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ನಲ್ಲಿ ನಡೆದಿದೆ.
ಆನೇಕಲ್ ಪಟ್ಟಣದ ಎಸ್.ಆರ್.ಆರ್ ಬಡಾವಣೆ ಅಕ್ಕಪಕ್ಕದಲ್ಲಿ ನಿನ್ನೆ ರಾತ್ರಿ ಸೀರೆ ತೊಟ್ಟು ಅನುಮಾನಾಸ್ಪದವಾಗಿ ಯುವಕನೊಬ್ಬ ಓಡಾಡುತ್ತಿದ್ದ.ಯುವಕನ ಹಾವ-ಭಾವ ನೋಡಿ ಅನುಮಾನಗೊಂಡ ಸ್ಥಳೀಯರು, ಆತನನ್ನು ಹಿಡಿಯಲು ಹೋದಾಗ ಓಡಿ ಹೋಗಲು ಯತ್ನಿಸಿದ್ದ. ಆದರೂ ಯುವಕನನ್ನು ಹಿಡಿಯುವಲ್ಲಿ ಯಶಸ್ವಿಯಾದ ಸ್ಥಳೀಯರು ಸೀರೆ ಬಿಚ್ಚಿಸಿದಾಗ ಆತ ಮಹಿಳೆಯಲ್ಲ, ಯುವಕ ಎನ್ನುವುದು ಗೊತ್ತಾಗಿದೆ.
ವಿಚಿತ್ರವಾಗಿ ಆಡುತ್ತಿದ್ದನ್ನು ನೋಡಿ ಆತನನ್ನು ಸ್ಥಳೀಯರು ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಆನೇಕಲ್ ಪೊಲೀಸರು ಯುವಕನ ವಿಚಾರಣೆ ನಡೆಸಿದಾಗ, ತನ್ನ ಹೆಸರು ಶ್ರೀಧರ್. ಕೆಲಸ ಇರಲಿಲ್ಲ. ಅದಕ್ಕಾಗಿ ಸೀರೆ ಉಟ್ಟು ಭಿಕ್ಷೆ ಬೇಡುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ. ಆತನ ಹೇಳಿಕೆ ಕೇಳಿ ಒಂದು ಕ್ಷಣ ಸ್ಥಳೀಯರು ಮತ್ತು ಪೊಲೀಸರು ಅಚ್ಚರಿ ವ್ಯಕ್ತಪಡಿಸಿದರು.
ಅಂದಹಾಗೆ ಶ್ರೀಧರ್ ಬಾಗಲಕೋಟೆ ಮೂಲದ ಯುವಕ. ಬೆಂಗಳೂರಿನ ಜೆ.ಪಿ ನಗರದಲ್ಲಿ ವಾಸವಿದ್ದ. ಕೆಲದಿನಗಳಿಂದ ಕೆಲಸ ಇಲ್ಲದೆ ಅಲೆದಾಡಿದ್ದ. ಕೆಲಸ ಸಿಗದ ಹಿನ್ನೆಲೆಯಲ್ಲಿ ಹೊಟ್ಟೆಪಾಡಿಗಾಗಿ ಸೀರೆ ಉಟ್ಟು ಭಿಕ್ಷೆ ಬೇಡುತ್ತಿದ್ದ. ಇಷ್ಟು ಮಾಹಿತಿಯನ್ನು ಪೊಲೀಸರ ತನಿಖೆ ವೇಳೆ ಶ್ರೀಧರ್ ಹೇಳಿಕೊಂಡಿದ್ದಾನೆ. ಯುವಕನನ್ನು ವಶಕ್ಕೆ ಪಡೆದಿರುವ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.