ಚಿಕ್ಕಮಗಳೂರು: ಪ್ರತಿವರ್ಷ ಶಿವರಾತ್ರಿ ಸಂದರ್ಭದಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ಆಗಮಿಸುತ್ತಾರೆ. ಆದರೆ ಈ ಬಾರಿ ಭಕ್ತರ ಪಾದಯಾತ್ರೆಯೇ ಜಾನುವಾರುಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.
ಪಾದಯಾತ್ರೆ ವೇಳೆ ಪಾದಯಾತ್ರಿಗಳು ಅಲ್ಲಲ್ಲಿ ಬಿಸಾಡಿದ ಅನ್ನ, ಪ್ಲಾಸ್ಟಿಕ್ ತಿಂದು ಜಾನುವಾರುಗಳು ಸಾವನ್ನಪ್ಪಿವೆ. ಕಳೆದ ಮೂರು ದಿನದಲ್ಲಿ 9ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿವೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು, ಜನ್ನಾಪುರ, ಬಣಕಲ್, ಕೊಟ್ಟಿಗೆಹಾರ ಸೇರಿ ಹಲವು ಗ್ರಾಮಗಳಲ್ಲಿ ದನಕರುಗಳು ಸಾವಿಗೀಡಾಗಿವೆ. ಹಸುಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ ಮಾಲೀಕರು.
ಈ ಬಾರಿ ಶಿವರಾತ್ರಿಗಾಗಿ ಬೆಂಗಳೂರು, ಮೈಸೂರು, ಮಂಡ್ಯ, ಕೋಲಾರ, ಹಾಸನ ಸೇರಿದಂತೆ ಅನೇಕ ಜಿಲ್ಲೆಗಳಿಂದ ಸಾವಿರಾರು ಪಾದಯಾತ್ರಿಗಳು ಚಿಕ್ಕಮಗಳೂರು ಮೂಲಕ ಧರ್ಮಸ್ಥಳಕ್ಕೆ ತೆರಳಿದ್ದರು. ಇವರೆಲ್ಲರ ನಿರ್ಲಕ್ಷ್ಯದಿಂದಾಗಿ ಅಮಾಯಕ ಜೀವಗಳು ಪ್ರಾಣ ತೆತ್ತಿವೆ.