ಪುತ್ತೂರು: ಗ್ಯಾಸ್ ಬಲೂನ್ ಒಂದು ವಿದ್ಯುತ್ ತಂತಿಗೆ ತಗುಲಿ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಅಲ್ಲೇ ನಿಂತಿದ್ದ ಕಾರಿಗೂ ಬೆಂಕಿ ತಗುಲಿ ಕಾರು ಬೆಂಕಿಗಾಹುತಿಯಾದ ಘಟನೆ ಬಡಗನ್ನೂರು ಗ್ರಾ.ಪಂ. ಮೈಂದಿನಡ್ಕದ ಪಡುಮಲೆ ಶ್ರೀ ಪೂಮಾಣಿ -ಕಿನ್ನಿಮಾಣಿ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದ ಸಮೀಪ ಜನವರಿ 18 ಮಧ್ಯಾಹ್ನ ನಡೆದಿದೆ.
ದೈವಸ್ಥಾನದ ಜಾತ್ರಾ ಮಹೋತ್ಸವ ನಡೆಯುತ್ತಿರುವ ಸಂದರ್ಭ ವಠಾರದಲ್ಲಿನ ವಿದ್ಯುತ್ ಕಂಬದ ಬಳಿ ಕಾರು ಪಾರ್ಕಿಂಗ್ ಮಾಡಲಾಗಿತ್ತು. ಈ ವೇಳೆ ಸಂತೆಯಲ್ಲಿದ್ದ ಬಲೂನ್ ಗಾಳಿಗೆ ಹಾರಿ ವಿದ್ಯುತ್ ತಂತಿಗೆ ತಗುಲಿದೆ.ಬಲೂನ್ ವಿದ್ಯುತ್ ತಂತಿಗೆ ತಗುಲುತ್ತಿದ್ದಂತೆ ಶಾರ್ಟ್ ಸರ್ಕ್ಯೂಟ್ ಊಂಟಾಗಿ ಬೆಂಕಿಯ ಕಿಡಿ ಅಲ್ಲೇ ಸ್ವಲ್ಪ ದೂರದಲ್ಲಿದ್ದ ಕಾರಿಗೆ ತಗುಲಿದೆ. ಕ್ಷಣಾರ್ಧದಲ್ಲೇ ಕಾರು ಹೊತ್ತಿ ಉರಿದಿದೆ. ಅಲ್ಲದೆ, ಬೆಂಕಿಯ ನಡುವೆ ಕಾರು ಆಕಸ್ಮಿಕವಾಗಿ ಮುಂದಕ್ಕೆ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಹೊತ್ತಿಕೊಂಡ ಕಿಡಿ ಕಾರಿಗೆ ತಗುಲಿದೆ. ಪರಿಣಾಮ ಕಾರು ಹೊತ್ತಿ ಉರಿದಿದೆ.ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಕಾರು ಭಾಗಶಃ ಸುಟ್ಟು ಕರಕಲಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.


