ಸುಳ್ಯ; ಕಾರು ಹಾಗೂ ಬೈಕ್ ಕಳ್ಳತನದ ಆರೋಪಿಯನ್ನು 4 ವರ್ಷಗಳ ಬಳಿಕ ಸುಳ್ಯ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಜಟ್ಟಿಪಳ್ಳ ನಿವಾಸಿ ಅಶ್ರಫ್ ರಿಪ್ವಾನ್ ಎಂಬಾತನನ್ನು ಕೇರಳದ ಕಣ್ಣೂರಿನಿಂದ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
2019ರಲ್ಲಿ ಕಾರು ಮತ್ತು ಬೈಕ್ ಕಳ್ಳತನದಲ್ಲಿ ಭಾಗಿಯಾಗಿದ್ದ ಈತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದ ಆರೋಪಿ ಮತ್ತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಅಲ್ಲದೆ ವಾರಂಟಿನಲ್ಲಿ ಇರುವ ವಿಳಾಸದಲ್ಲಿ ಆತ ವಾಸವಾಗದೆ ಪೊಲೀಸರಿಗೆ ದಸ್ತಗಿರಿಗೆ ಸಿಗದೇ ಕೇರಳಕ್ಕೆ ಹೋಗಿ ತಲೆಮರೆಸಿಕೊಂಡಿದ್ದ.
ನ್ಯಾಯಾಲಯವು ಆರೋಪಿಗೆ ಹಲವಾರು ಬಾರಿ ವಾರೆಂಟ್ ನೀಡಿದ್ದರೂ ಪೊಲೀಸರ ಕೈಗೆ ಸಿಗದೆ ಸತಾಯಿಸುತ್ತಿದ್ದ ಎನ್ನಲಾಗಿದೆ. ಇದೀಗ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು,ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕ ದಿಲೀಪ್ ರವರ ಮಾರ್ಗದರ್ಶನದಂತೆ ಪೊಲೀಸ್ ಸಿಬ್ಬಂದಿಗಳಾದ ಉಮೇಶ್ ಹಾಗೂ ಪುರುಷೋತ್ತಮ್ ರವರು ಕೇರಳದ ಕಣ್ಣೂರಿಗೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಸುಳ್ಯಕ್ಕೆ ಕರೆತಂದಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.