ಕಾಸರಗೋಡು; ಪೊಲೀಸ್ ಠಾಣೆಯಲ್ಲಿ ಬಾಲಕನೊಬ್ಬ ಹುಟ್ಟುಹಬ್ಬ ಆಚರಿಸಿಕೊಂಡ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಪೊಲೀಸ್ ಠಾಣೆಯಲ್ಲಿಯೇ ಬರ್ತಡೇ ಆಚರಿಕೊಳ್ಳಬೇಕೆಂದು ಬಾಲಕನೋರ್ವ ಪಟ್ಟು ಹಿಡಿದಿದ್ದು ಕೊನೆಗೆ ಮಂಜೇಶ್ವರ ವರ್ಕಾಡಿ ಕಲ್ಲೂರು ಗ್ರಾಮದ ಪುಟ್ಟ ಹುಡುಗನ ಕೋರಿಕೆಯನ್ನು ಮಂಜೇಶ್ವರ ಪೊಲೀಸ್ ಠಾಣೆಯ ಪೊಲೀಸರು ಈಡೇರಿಸಿದ್ದಾರೆ.
ವರ್ಕಾಡಿಯ ಕಲ್ಲೂರಿನ ಅಝೀಝ್ ಕಲ್ಲೂರು ಮತ್ತು ಆರಿಫಾ ದಂಪತಿಯ ಪುತ್ರ, ವರ್ಕಾಡಿ ಧರ್ಮನಗರ ಮಣವಾಠಿ ಬೀವಿ ಆಂಗ್ಲ ಮಾಧ್ಯಮ ಶಾಲೆಯ ಯುಕೆಜಿ ವಿದ್ಯಾರ್ಥಿ ಆಶಿಲ್ ತನ್ನ ಇಚ್ಛೆಯಂತೆ ತನ್ನ 6ನೇ ವರ್ಷದ ಹುಟ್ಟುಹಬ್ಬವನ್ನು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಕೇಕ್ ಕತ್ತರಿಸಿ, ಸಿಹಿತಿಂಡಿ ಹಂಚಿ ಆಚರಿಸಿಕೊಂಡಿದ್ದಾನೆ.
ತನ್ನ ಹುಟ್ಟುಹಬ್ಬವನ್ನು ಪೊಲೀಸ್ ಠಾಣೆಯಲ್ಲಿ ಆಚರಿಸಬೇಕೆಂದು ಆಶಿಲ್ ತಂದೆ ತಾಯಿ ಬಳಿ ಪಟ್ಟು ಹಿಡಿದಿದ್ದನು. ಈ ನಿಟ್ಟಿನಲ್ಲಿ ತಂದೆ ಅಝೀಜ್ ಕಲ್ಲೂರು ಅವರು ಮಂಜೇಶ್ವರ ಠಾಣೆಯ ಪೊಲೀಸರನ್ನು ಸಂಪರ್ಕಿಸಿದರು. ಆಶಿಲ್ ನ ಮಹದಾಸೆಯಂತೆ ಮಂಜೇಶ್ವರ ಠಾಣೆಯಲ್ಲಿಯೇ ಹುಟ್ಟುಹಬ್ಬವನ್ನು ಆಚರಿಸಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ.