ಬಳ್ಳಾರಿ: ಒಡಹುಟ್ಟಿದವರು ಒಟ್ಟಿಗೆ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಳ್ಳಾರಿ ಸಮೀಪದ ಹಲಕುಂದಿ ಗ್ರಾಮದಲ್ಲಿ ನಡೆದಿದೆ.
ಬಸಪ್ಪ ಹಾಗೂ ದುರ್ಗಮ್ಮ ದಂಪತಿಯ ಪುತ್ರರಾದ ಸಿದ್ದೇಶ್ ಹಾಗೂ ಬಸವ ಸಾವನ್ನಪ್ಪಿದ ಸಹೋದರರು. 22 ವರ್ಷದ ಸಿದ್ದೇಶ್ಗೆ ರಕ್ತದೊತ್ತಡ ಹೆಚ್ಚಾಗಿ ಸಾವನ್ನಪ್ಪಿದ್ದರು. ತಮ್ಮನ ಸಾವಿನ ಸುದ್ದಿ ಕೇಳಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವ ಗ್ರಾಮಕ್ಕೆ ವಾಪಸ್ ಆಗಿದ್ದರು. ತೀವ್ರ ದುಃಖದಲ್ಲಿ ಶವಸಂಸ್ಕಾರ ನಡೆಸಿ ವಾಪಸ್ ಆಗಿದ್ದರು.
ಆದರೆ ನಂತರದಲ್ಲಿ ತಮ್ಮನ ಸಾವಿನ ನೋವಿನಲ್ಲಿದ್ದ ಸಹೋದರ ಬಸವ ಅವರಿಗೂ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದ್ದು, ಸಹೋದರರ ಅಂತ್ಯ ಸಂಸ್ಕಾರವನ್ನು ಅಕ್ಕಪಕ್ಕದಲ್ಲೇ ನಡೆಸಿದ್ದಾರೆ.
ಬಸಪ್ಪ ಹಾಗೂ ದುರ್ಗಮ್ಮ ದಂಪತಿಗೆ ಮೂರು ಜನ ಗಂಡು ಮಕ್ಕಳಿದ್ದು, ಸಿದ್ದೇಶ್ ಖಾಸಗಿ ಕಾರ್ಖಾನೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ಆದರೆ ಆರೋಗ್ಯದಲ್ಲಿ ಏಕಾಏಕಿ ವ್ಯತ್ಯಾಸ ಉಂಟಾಗಿ ಸಾವನ್ನಪ್ಪಿದ್ದ. ಇತ್ತ ಬೆಂಗಳೂರಿನಲ್ಲಿ ಬಸವ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಈಗಾಗಲೇ ಎರಡು ಅಘಾತಗಳನ್ನು ಎದುರಿಸಿರುವ ಕುಟುಂಬಕ್ಕೆ ಮತ್ತೊಂದು ಅಘಾತ ಎದುರಾಗಿದ್ದು, ಇಬ್ಬರು ಸಹೋದರರನ್ನು ಏಕಾಏಕಿ ಕಳೆದುಕೊಂಡಿರುವ ಹಿರಿಯ ಸಹೋದರ ಕೆಂಚಪ್ಪನ ಆರೋಗ್ಯದಲ್ಲೂ ವ್ಯತ್ಯಯವಾಗಿದೆ ಎಂಬ ಮಾಹಿತಿ ಲಭಿಸಿದೆ.