ಕೋಲ್ಕತ್ತಾ: ಪಶ್ಚಿಮ ಬಂಗಾಳ ಬಿಜೆಪಿ ಸಂಸದ ಸೌಮಿತ್ರ ಖಾನ್ ಅವರ ಪತ್ನಿ ಸುಜಾತ ಮೋಂಡಲ್ ಖಾನ್ ಟಿಎಂಸಿ ಪಕ್ಷವನ್ನ ಸೇರಿಕೊಂಡಿದ್ದಾರೆ. ಇದಾಗಿ ಕೆಲವೇ ಕ್ಷಣಗಳಲ್ಲಿ ಪ್ರತಿಕ್ರಿಯಿಸಿರುವ ಸೌಮಿತ್ರ ಖಾನ್ ‘ನಮ್ಮ ಮದುವೆಯನ್ನ ರಾಜಕೀಯ ಮುಗಿಸಿಬಿಡ್ತು. ಶೀಘ್ರದಲ್ಲೇ ಆಕೆಗೆ ವಿಚ್ಛೇದನ ನೋಟಿಸ್ ಕಳಿಸ್ತೀನಿ’ ಅಂತ ಹೇಳಿದ್ದಾರೆ.
ಅಷ್ಟೇ ಅಲ್ಲದೆ ತನ್ನ ಪತ್ನಿಯ ಈ ಕೃತ್ಯದಿಂದ ತನಗೆ ತೀವ್ರ ನೋವು ಹಾಗೂ ಅಗಾಧವಾಗಿದೆ. ಕಾಂಗ್ರೆಸ್ ಪಕ್ಷ ನಮ್ಮಿಬ್ಬರ ಹತ್ತು ವರ್ಷ ದಾಂಪತ್ಯ ಜೀವನವನ್ನು ನಾಶ ಮಾಡುತ್ತಿದೆ. ಇಂದಿನಿಂದ ನಾನು ಅವಳೊಂದಿಗೆ ಯಾವುದೇ ಸಂಬಂಧ ಹೊಂದಿರುವುದಿಲ್ಲ. ಸುಜಾತಾ ರಿಂದ ವಿಚ್ಛೇದನ ಪಡೆಯಲು ನೋಟಿಸ್ ಕಳಿಸುತ್ತೇನೆ ಎಂದು ಹೇಳಿದರು.
ಅಂದ್ಹಾಗೆ ಸೌಮಿತ್ರ ಖಾನ್ ಕೂಡ ಒಂದು ಕಾಲದಲ್ಲಿ ಟಿಎಂಸಿ ಪಕ್ಷದಲ್ಲಿದ್ದರು. ಆದ್ರೀಗ ಅವರು ಬಿಜೆಪಿ ಸಂಸದ ಮತ್ತು ಪಶ್ಚಿಮ ಬಂಗಾಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಸೌಮಿತ್ರ ಖಾನ್ ದಾಖಲಿಸಿದ ಗೆಲುವಿನಲ್ಲಿ ಅವರ ಪತ್ನಿ ಸುಜಾತ ಖಾನ್ ಪಾತ್ರ ದೊಡ್ಡದಿತ್ತು. ಅಲ್ಲದೆ ಬಿಜೆಪಿ ಸದಸ್ಯೆಯಾಗಿದ್ದ ಸುಜಾತ ಪ್ರಧಾನಿ ಮೋದಿ ಜೊತೆಗೂ ವೇದಿಕೆ ಹಂಚಿಕೊಂಡಿದ್ದರು.
ಇದೀಗ ಅವರೇ ಟಿಎಂಸಿ ಸೇರಿರೋದು ಬಿಜೆಪಿಗೆ ಪೆಟ್ಟು ಕೊಟ್ಟಂತಾಗಿದೆ. ಇದೇ ವೇಳೆ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿರುವ ಅವರು, ನಾನು ನನ್ನ ಕೆಲಸ ಕಳೆದುಕೊಂಡೆ. ನನ್ನ ಹೆತ್ತವರು ಕತ್ತಲಲ್ಲಿ ಬದುಕಿದ್ರು. ನಾನು ಯಾವ ಪಕ್ಷಕ್ಕಾಗಿ ರಕ್ತ ಸುರಿಸಿದೆನೋ ಅಲ್ಲಿ ನನಗೆ ಬೆಲೆ ಇಲ್ಲ. ಪಕ್ಷದಲ್ಲಿ ನನಗೆ ಸ್ಥಾನವಿಲ್ಲ. ಅಸಮರ್ಥ ನಾಯಕರಿಗೆ ಸ್ಥಾನ ನೀಡಿದೆ ಎಂದಿದ್ದಾರೆ. ಸೌಮಿತ್ರ ಖಾನ್ ಬುದ್ಧಿವಂತರಾಗಿದ್ದರೆ, ಅವರು ಸಹ ಹಿಂದಿರುಗುತ್ತಾರೆ ಅಂತ ಸುಜಾತಾ ಹೇಳಿರುವುದಾಗಿ ವರದಿಯಾಗಿದೆ.
ನಾನು ಸುವೆಂದು ಅಧಿಕಾರಿಯನ್ನು ನಾಯಕ ಎಂದು ಭಾವಿಸುವುದಿಲ್ಲ. ಅವರು ಅವಕಾಶಕ್ಕಾಗಿ ಹುಡುಕುವವರು. ನಾನು ದುರಾಸೆಯ ನಾಯಕರ ಬಗ್ಗೆ ಮಾತನಾಡಲು ಬಯಸುವುದಿಲ್ಲ ಎಂದು ಸುಜಾತಾ ಟಾಂಗ್ ಕೊಟ್ಟಿದ್ದಾರೆ.